ಬೆಂಗಳೂರು: ಹಿರಿಯ ನಾಯಕರಾಗಿದ್ದ ಭೀಮಣ್ಣ ಖಂಡ್ರೆ ಅವರ ನಿಧನದ ಸುದ್ದಿ ಕೇಳಿ ದುಖಿತನಾಗಿದ್ದೇನೆ. ಭೀಮಣ್ಣ ಖಂಡ್ರೆ ಅವರು ಹಿರಿಯ ಮಾರ್ಗದರ್ಶಕರಾಗಿದ್ದರು. ಅವರು ಆದರ್ಶದ ಬದುಕು ನಡೆಸಿದ್ದಾರೆ. ಹೋರಾಟದ ಬದುಕು ನಡೆಸಿದ್ದಾರೆ. ವಿಶೇಷವಾಗಿ ರೈತರಿಗೆ ದೀನ ದಲಿತರಿಗೆ ಮತ್ತು ಬೀದರಿನ ಅಭಿವೃದ್ಧಿಯಲ್ಲಿ ಅವರು ಮಾಡಿರುವ ಕೆಲಸ ಕಾರ್ಯಗಳು ಸ್ಥಿರಸ್ಥಾಯಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಮೂಲಕ ಸಂತಾಪ ಸೂಚಿಸಿರುವ ಅವರು, ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿ ಬೆಳೆಸಿದ್ದರು. ಗಟ್ಟಿ ಧ್ಬನಿಯಾಗಿದ್ದರು. ಸಮಾಜಕ್ಕೆ ನ್ಯಾಯ ಒದಗಿಸಲು ಕೊನೆ ಉಸಿರು ಇರುವವರೆಗೂ ಹೋರಾಟ ಮಾಡಿದ್ದರು. ಅವರ ಅಗಲಿಕೆಯಿಂದ ಕರ್ನಾಟಕ ಬಡವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಬಡವಾಗಿದೆ. ನಮ್ಮ ತಂದೆಯವರೊಂದಿಗೆ ಬಹಳ ನಿಕಟವಾದ ಸಂಬಂಧ ಇಟ್ಟುಕೊಂಡಿದ್ದ ನಾಯಕರು ಅಗಲಿರುವುದು ವೈಯಕ್ತಿಕವಾಗಿ ನನಗೆ ತುಂಬ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.





















