ಪಣಜಿ(ಕಾಣಕೋಣ): ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಧಂತಿ ಉತ್ಸವದ ಅಂಗವಾಗಿ ನ. 27ರಿಂದ ಡಿ. 7ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನ. 28ರಂದು ಪ್ರಧಾನಿ ನರೇಂದ್ರ ಮೋದಿಯವರು 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ಅನಾವರಣಗೊಳಿಸಲಿದ್ದಾರೆ.
ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿ ಕಾರ್ಯಕ್ರಮದ ವಿವರಗಳನ್ನು ನೀಡಿದ್ದಾರೆ. ಅಂದು ಸುಮಾರು 30,000 ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಒಟ್ಟು 10 ದಿನ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಮಠದ ಪ್ರವೇಶ ದ್ವಾರದಲ್ಲಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿ ಸ್ಥಾಪಿಸಲಾಗುತ್ತಿದೆ. ಇಲ್ಲಿ ಥೀಮ್ ಪಾರ್ಕ್ ಸಹ ನಿರ್ಮಿಸಲಾಗುತ್ತಿದೆ. ಇದು ರಾಮನ ಆದರ್ಶಗಳನ್ನು ಪ್ರಚುರ ಪಡಿಸಲಿದೆ ಎಂದರು.
ಡಿ. 24ರಿಂದ 31ರ ವರೆಗೆ ಭಜನಾ ಸಪ್ತಾಹ ಆಯೋಜಿಸಲಿದ್ದು, ಏಳು ದಿನ ನಿರಂತರ ಭಜನೆ ನಡೆಸಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಎರಡನೇ ವಾರ್ಷಿಕೋತ್ಸವವನ್ನು ಡಿ. 31ರಂದು ನಡೆಸಲಾಗುವುದು. ರಾಮ ರಥಯಾತ್ರೆ ಅ. 18ರಂದು ಬದರೀನಾಥದಿಂದ ಈಗಾಗಲೇ ಆರಂಭವಾಗಿದೆ. ನ. 20ರಂದು ರಥವು ಗೋವಾ ಪ್ರವೇಶಿಸುತ್ತದೆ. ಹವನ-ಹೋಮಗಳು ನ. 27ರಿಂದ ಆರಂಭಗೊಳ್ಳಲಿವೆ ಎಂದು ವಿವರಿಸಿದರು.























