ದಾಂಡೇಲಿ : ಉತ್ತರಾಖಂಡದಲ್ಲಿ ಕೇದಾರನಾಥ ದೇವಾಲಯದ ಆಧ್ಯಾತ್ಮಿಕ ಯಾತ್ರೆಯಲ್ಲೂ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಯುವ ಭಕ್ತರು ತಮ್ಮ ಜಿಲ್ಲೆಯಲ್ಲಿ ಪ್ರಸ್ತಾಪಿತ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ.
ಕಾರವಾರದ ಅಭಿಷೇಕ ಕಳಸ ಮತ್ತು ಹೊನ್ನವರದ ವಿನಾಯಕ ನಾಯಕ ಪವಿತ್ರ ಕೇದಾರನಾಥ ದೇವಾಲಯಕ್ಕೆ ಯಾತ್ರೆ ಕೈಗೊಂಡವರಾಗಿದ್ದಾರೆ. ಕೇದಾರನಾಥನ ದಿವ್ಯ ಸನ್ನಿಧಿಯ ಪವಿತ್ರ ವಾತಾವರಣದಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿ ಸರ್ಕಾರ ಬೆಂಬಲಿತ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಯಿಂದ ಹೊನ್ನಾವರ ಹಾಗೂ ಸಾಗರ ತಾಲೂಕಿನಲ್ಲಿ ಉಂಟಾಗುವ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.
ಈ ಯೋಜನೆಯು ಅವೈಜ್ಞಾನಿಕವಾಗಿದ್ದು, ಈ ಪ್ರದೇಶಕ್ಕೆ ಯೋಜನೆಯ ಅಗತ್ಯವಿಲ್ಲ. ಸ್ಥಳೀಯ ಪರಿಸರ ವ್ಯವಸ್ಥೆ ಮತ್ತು ಸಮುದಾಯದ ಹಿತಾಸಕ್ತಿಗಳಿಗೆ ಹಾನಿ ಮಾಡಬಹುದೆಂದು ಪ್ರತಿಪಾದಿಸಿದ್ದಾರೆ. ಈ ಇಬ್ಬರು ಯುವ ಭಕ್ತರು ಆಧ್ಯಾತ್ಮಿಕ ಯಾತ್ರೆಯ ಮೂಲಕ ಸಾಮಾಜಿಕ ಜವಾಬ್ದಾರಿಯ ಮೌಲ್ಯವನ್ನು ಎತ್ತಿ ತೋರಿಸುವದರೊಂದಿಗೆ, ಸಮಾಜಕ್ಕೆ ಅಭಿವೃದ್ಧಿಯನ್ನು ಪರಿಸರ ಸಂರಕ್ಷಣೆಯೊಂದಿಗೆ ಸಮತೋಲನಗೊಳಿಸುವ ಅಗತ್ಯತೆಯ ಬಗ್ಗೆ ಬಲವಾದ ಸಂದೇಶ ನೀಡಿದ್ದಾರೆ.
ಅವರ ಈ ನಡೆ ಯಾತ್ರಾರ್ಥಿಗಳ ಗಮನಸೆಳೆದಿದೆ. ಜಿಲ್ಲೆಯಲ್ಲಿ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.