ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿಗೆ ಮತ್ತೆ ಇಡಿ ದಾಳಿ ಬಿಸಿ ಮುಟ್ಟಿಸಿದೆ. ಗುರುವಾರ ಚಳ್ಳಕೆರೆಗೆ ನಾಲ್ಕು ಕಾರುಗಳಲ್ಲಿ ದಾಳಿಯಿಟ್ಟ ಅಧಿಕಾರಿಗಳು ಬ್ಯಾಂಕ್ ಖಾತೆ, ಲಾಕರ್ ಪರಿಶೀಲನೆ ನಡೆಸಿ, 50 ಕೋಟಿ ರೂ. ಮೌಲ್ಯದ 40 ಕೇಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಈಗಾಗಲೇ ಇಡಿ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನ, ನಗದು ವಶಪಡಿಸಿಕೊಂಡಿದ್ದು, ಪಪ್ಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕನ್ನಡದ ಹಿರಿಯ ನಟ ದೊಡ್ಡಣ್ಣ ಅಳಿಯ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮತ್ತು ಅವರು ವ್ಯವಹಾರ ನಡೆಸುವ ಹಲವಾರು ಜನರ ವಿರುದ್ಧ ಇಡಿ ತನಿಖೆ ನಡೆಸುತ್ತಲೇ ಇದೆ.
ಗುರುವಾರದ ದಾಳಿ ಕುರಿತು ಇಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಅಕ್ರಮ ಆನ್ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಸಾರ್ವಜನಿಕರನ್ನು ವಂಚಿಸಿದ ಕೆ.ಸಿ.ವೀರೇಂದ್ರ ಮತ್ತು ಇತರರ ಪ್ರಕರಣದಲ್ಲಿ 2002ರ ಪಿಎಂಎಲ್ಎ ನಿಬಂಧನೆಗಳ ಅಡಿಯಲ್ಲಿ ಬೆಂಗಳೂರಿನ ಇಡಿ 09.10.2025ರಂದು ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಹೇಳಿದೆ.
ಈ ಶೋಧದ ಸಮಯದಲ್ಲಿ, ಚಳ್ಳಕೆರೆಯಲ್ಲಿರುವ ಎರಡು ಲಾಕರ್ಗಳಿಂದ 50.33 ಕೋಟಿ ರೂ. ಮೌಲ್ಯದ 40 ಕೆಜಿ (ಅಂದಾಜು) ತೂಕದ 24 ಕ್ಯಾರೆಟ್ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು, ಇಡಿ ಸುಮಾರು 21 ಕೆಜಿ ಚಿನ್ನದ ಗಟ್ಟಿಗಳು, ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು, ಬ್ಯಾಂಕ್ ಖಾತೆಗಳು ಮತ್ತು ದುಬಾರಿ ವಾಹನಗಳ ರೂಪದಲ್ಲಿ 103 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ವಿವರ ನೀಡಿದೆ.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 150 ಕೋಟಿ ರೂ.ಗಳಿಗಿಂತ ಹೆಚ್ಚು. ಸದ್ಯ ಕೆ.ಸಿ.ವಿರೇಂದ್ರ ಪಪ್ಪಿ ನ್ಯಾಯಾಂಗ ಬಂಧನದಲ್ಲಿದ್ದು, ಅವರ ವಿರುದ್ಧ ಇಡಿ ತನಿಖೆ ಮುಂದುವರೆದಿದೆ.
ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಶಾಸಕ ವಿರೇಂದ್ರ ಪಪ್ಪಿಯನ್ನು ಸಿಕ್ಕಿಂನಲ್ಲಿ ಇಡಿ ಬಂಧಿಸಿತ್ತು. ಶಾಸಕ ವೀರೇಂದ್ರ ಪಪ್ಪಿ ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ಇಡಿ ದಾಳಿ ನಡೆಸುತ್ತಲೇ ಇದೆ.
ಆಗಸ್ಟ್ 22ರಂದು ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳ ತಂಡ ಚಿತ್ರದುರ್ಗದ 6, ಬೆಂಗಳೂರು ನಗರದ 10, ಹುಬ್ಬಳ್ಳಿಯ 1, ರಾಜಸ್ಥಾನದ 3, ಮುಂಬೈನ 2, ಗೋವಾದ 5 ಕ್ಯಾಸಿನೋಗಳ ಮೇಲೆ ದಾಳಿ ಮಾಡಿದ್ದರು. ಬಳಿಕ ಸಿಕ್ಕಿಂನಲ್ಲಿ ವಿರೇಂದ್ರ ಪಪ್ಪಿ ಬಂಧಿಸಲಾಗಿತ್ತು.