ಆಕಾಶ್ ಆಡಿಯೋ ಕ್ಷಣಗಳನ್ನು ನೆನಪಿಸಿಕೊಂಡ ಮಧು ಬಂಗಾರಪ್ಪ

0
93

ಶಿವಮೊಗ್ಗ ದಸರಾ 2025 ಅಂಗವಾಗಿ ಆಯೋಜಿಸಲಾಗಿರುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಿತ್ರರಂಗದ ಜೊತೆಗಿನ ನಂಟನ್ನು ನೆನಪಿಸಿಕೊಂಡರು.

ಶಿವಮೊಗ್ಗ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ, ಶಿವಮೊಗ್ಗ ಚಿತ್ರಸಮಾಜ ಸಂಯುಕ್ತಾಶ್ರಯದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ದಸರಾ ಚಲನಚಿತ್ರೋತ್ಸವನ್ನು ಸಚಿವರು ಉದ್ಘಾಟಿಸಿದರು.

“ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ತಗುಲಿದೆ. ಇಂತಹ ಕಳಂಕಗಳಿಂದ ಚಿತ್ರರಂಗ ಹೊರಬಂದು ಮನೋರಂಜನೆಯ ಜೊತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು” ಎಂದು ಮಧು ಬಂಗಾರಪ್ಪ ಹೇಳಿದರು.

“ಚಿತ್ರರಂಗ ಇಂದು ಸಾಕಷ್ಟು ಸಮಸ್ಯೆ, ಸವಾಲುಗಳ ನಡುವೆಯೂ ಹಲವು ತಜ್ಞರ, ಪರಿಣಿತರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದರ ಕಾರಣದಿಂದಾಗಿ ರಾಜ್ಯದಲ್ಲಿ ಚಿತ್ರರಂಗ, ಚಿತ್ರಮಂದಿರಗಳು ಜೀವಂತವಾಗಿವೆ. ಇಲ್ಲದಿದ್ದಲ್ಲಿ ಪೆಳಿಯುಳಿಕೆಗಳಾಗಿ ನೋಡಬೇಕಾಗಿತ್ತು” ಎಂದರು.

ಇಂತಹ ಅನೇಕ ಕಾರಣಗಳಿಂದಾಗಿ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಚಿತ್ರರಂಗಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು ರಾಜ್ಯದಲ್ಲಿಯೇ ನೋಡುವಂತಾಗಿದೆ. ಇದಕ್ಕೂ ಮುನ್ನ ರಾಜ್ಯದ ಚಲನಚಿತ್ರದ ನಿರ್ಮಾಪಕರು ತಮ್ಮ ಅಗತ್ಯಗಳಿಗಾಗಿ ಮದ್ರಾಸ್‌ಗೆ ಹೋಗಬರಬೇಕಾಗುತ್ತಿತ್ತು ಎಂದ ಅವರು, ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದ ಆಕಾಶ್ಆಡಿಯೋ ಸ್ಥಾಪಿಸಿದ್ದ ಕ್ಷಣಗಳನ್ನು ನೆನಪಿಸಿಕೊಂಡರು.

“ಪ್ರತಿ ವ್ಯಕ್ತಿಯೂ ತಾನು ತನ್ನ ಕಾರ್ಯಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮಾಡುವ ಕಾರ್ಯದಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾನೆ ಎಂಬುದಕ್ಕೆ ನಟರೇ ಸಾಕ್ಷಿ. ಶಿವಮೊಗ್ಗ ಜಿಲ್ಲೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕವಿ-ಕಲಾವಿದರನ್ನು ಉಳಿಸಿ-ಬೆಳೆಸುವ, ಅನುಸರಿಸುವ ಹೊಣೆಗಾರಿಕೆ ಎಲ್ಲರದ್ದಾಗಿದೆ” ಎಂದು ಕರೆ ನೀಡಿದರು.

“ದೇವಾಲಯಗಲ್ಲಿನ ಗಂಟೆ ಸದ್ದಿಗಿಂತ ಶಾಲೆಗಳಲ್ಲಿ ಮೊಳಗುವ ಗಂಟೆ ಸದ್ದು ದೇಶವನ್ನು ಕಟ್ಟುವ ಯುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ರೂಪಿಸುತ್ತದೆ. ಅದು ಸಾಮಾಜಿಕವಾಗಿ ಸ್ಥಾನಮಾನ ಹೊಂದಲು ಶಿಕ್ಷಣ ಸಹಕಾರಿಯಾಗಿದೆ. ಶಿವಮೊಗ್ಗ ದಸರಾ ಅಂಗವಾಗಿ ಚಿತ್ರರಂಗದ ಹಲವು ಘಟನಾವಳಿಗಳನ್ನಾಧರಿಸಿದ ಅತ್ಯರೂಪದ ಛಾಯಾಚಿತ್ರಗಳನ್ನು ಒಳಗೊಂಡ ಛಾಯಾಚಿತ್ರ ಪ್ರದರ್ಶನ ಅತ್ಯಂತ ವಿಶೇಷವೆನಿಸಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, “ರಾಜ್ಯ ಸರ್ಕಾರದ 50 ಲಕ್ಷ ರೂ.ಗಳ ಆರ್ಥಿಕ ನೆರವಿನೊಂದಿಗೆ ಸುಮಾರು 2.50ಕೋಟಿ ರೂ.ಗಳ ವೆಚ್ಚದಲ್ಲಿ ಶಿವಮೊಗ್ಗ ದಸರಾವನ್ನು ಅತ್ಯಂತ ಸಂಭ್ರಮ-ಸಡಗರಗಳಿಂದ ಆಚರಿಸಲಾಗುತ್ತಿದೆ. ಈ ದಸರಾ ಅಂಗವಾಗಿ ಏರ್ಪಡಿಸಲಾಗುತ್ತಿರುವ ಅನೇಕ ವೇದಿಕೆಗಳಲ್ಲಿ ಸಹಸ್ರಾರು ಸಂಖ್ಯೆಯ ಕಲಾವಿದರಿಗೆ, ಪ್ರತಿಭಾವಂತರಿಗೆ, ಗಣ್ಯರಿಗೆ ವೇದಿಕೆ ದೊರೆಯಲಿದೆ” ಎಂದು ತಿಳಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟ ಶರಣ್ ಮಾತನಾಡಿ, “ಹಲವು ಸಮಸ್ಯೆ-ಸವಾಲುಗಳಿಂದಾಗಿ ಬೆಳ್ಳಿ ತೆರೆ ತನ್ನ ಮಹತ್ವವನ್ನು ಕಳೆದುಕೊಂಡು ಸೊರಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಕಲೆಯನ್ನು ಪ್ರೋತ್ಸಾಹಿಸುವ, ಕಲಾವಿದರನ್ನು ಪೋಷಿಸುವ ಮನಸ್ಸುಗಳ ತುರ್ತು ಅಗತ್ಯವಿದೆ” ಎಂದರು.

Previous articleಎಸ್.ಎಲ್.ಭೈರಪ್ಪಗೆ ಸಿದ್ದರಾಮಯ್ಯ ಸೇರಿ ಹಲವು ಗಣ್ಯರಿಂದ ಅಂತಿಮ ನಮನ
Next articleಬಿಹಾರ ಚುನಾವಣೆಯಲ್ಲಿ ಬಿಜೆಪಿ ಪ್ರತಿಷ್ಠೆ: ಉಸ್ತುವಾರಿಗಳ ನೇಮಕ

LEAVE A REPLY

Please enter your comment!
Please enter your name here