ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡು ಗೆಲುವುಗಳೊಂದಿಗೆ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿರುವ ಭಾರತ ತಂಡ, ಶುಕ್ರವಾರ ಒಮಾನ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಮಹತ್ವದ ಹಣಾಹಣಿಗೆ ಮುನ್ನ ಟೀಂ ಇಂಡಿಯಾ ಬ್ಯಾಟರ್ಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವನ್ನು ಒದಗಿಸಲಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ, ಹಿಂದಿನ ಎರಡೂ ಪಂದ್ಯಗಳಲ್ಲಿ ಕಡಿಮೆ ಸ್ಕೋರ್ಗಳನ್ನು ಬೆನ್ನಟ್ಟಿ ಗೆದ್ದಿತ್ತು. ಇದರಿಂದಾಗಿ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರಂತಹ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಒಮಾನ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಸಂಪೂರ್ಣ 20 ಓವರ್ಗಳನ್ನು ಆಡಲು ಭಾರತ ಎದುರು ನೋಡುತ್ತಿದೆ. ಇದು ಈ ಆಟಗಾರರಿಗೆ ತಮ್ಮ ಲಯ ಕಂಡುಕೊಳ್ಳಲು ಮತ್ತು ಪಾಕಿಸ್ತಾನ ಪಂದ್ಯಕ್ಕೆ ಸಿದ್ಧರಾಗಲು ನೆರವಾಗಲಿದೆ.
ಭಾರತದ ಬೌಲಿಂಗ್ ವಿಭಾಗ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಶ್ರೇಷ್ಠ ಸ್ಪಿನ್ನರ್ಗಳನ್ನು ಒಳಗೊಂಡಿದ್ದು, ಒಮಾನ್ ಬ್ಯಾಟರ್ಗಳಿಗೆ ಸವಾಲಾಗಲಿದೆ. ಒಮಾನ್ ತಂಡವು ಹಿಂದಿನ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ (67ರನ್) ಮತ್ತು ಯುಎಇ (130 ರನ್) ವಿರುದ್ಧ ಅಲ್ಪ ಮೊತ್ತಕ್ಕೆ ಆಲೌಟ್ ಆಗಿತ್ತು. ಅವರ ಯಾವುದೇ ಬ್ಯಾಟರ್ 30 ರನ್ಗಳ ಗಡಿ ದಾಟಿಲ್ಲ. ಹೀಗಾಗಿ, ಭಾರತದ ಬೌಲರ್ಗಳ ಎದುರು ಒಮಾನ್ ಮತ್ತೊಮ್ಮೆ ಕಷ್ಟಪಡುವ ಸಾಧ್ಯತೆಯಿದೆ.
ಪಾಕಿಸ್ತಾನದ ವಿರುದ್ಧದ ಪಂದ್ಯದ ಪ್ರಾಮುಖ್ಯತೆಯನ್ನು ಮನಗಂಡಿರುವ ಕೋಚ್ ಗಂಭೀರ್, ಯಾವುದೇ ಆಟಗಾರನಿಗೆ ವಿಶ್ರಾಂತಿ ನೀಡದಿರಲು ನಿರ್ಧರಿಸಿದ್ದಾರೆ. ಜಸ್ಪ್ರಿತ್ ಬುಮ್ರಾ ಅವರು ವಿಶ್ರಾಂತಿ ಬಯಸಿದರೆ ಮಾತ್ರ ಅದನ್ನು ಪರಿಗಣಿಸಬಹುದು. ಒಮಾನ್ ವಿರುದ್ಧದ ಈ ಅನೌಪಚಾರಿಕ ಪಂದ್ಯದಲ್ಲಿ ಬುಮ್ರಾ ಬದಲಿಗೆ ಅರ್ಷದೀಪ್ ಸಿಂಗ್ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಅಲ್ಲದೆ, ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಿಕೊಂಡು ಕೆಳಕ್ರಮಾಂಕದಲ್ಲಿ ಆಡಬಹುದು.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸೂಫಿಯಾನ್ ಯೂಸೂಫ್, ಆಶಿಶ್ ಒಡೆದರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫಿಯಾನ್ ಮೊಹಮ್ಮದ್, ಆರ್ಯನ್ ಬಿಸ್ತ್, ಕರಣ್ ಸೋನಾವಾಲೆ, ಜಿಕ್ರಿಯಾ ಇಸ್ಲಾಂ, ಸಮಯ್ ಶ್ರೀವತ್ಸ, ಹಸ್ನೇನ್ ಶಾ, ಶಾ ಫೈಸಲ್, ನದೀಮ್ ಖಾನ್, ವಸೀಂ ಅಲಿ, ಜಿತೆನ್ ರಾಮನಂದಿ, ಆರ್ಯನ್ ಬಿಸ್ತ್, ಶಖೀಲ್ ಅಹ್ಮದ್.