ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಈ ವ್ಯವಸ್ಥೆ ಉದ್ಘಾಟಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಸ್ಟ್-2024ರ ಅಂತ್ಯದಲ್ಲಿ ಸುಮಾರು 190 ಅಪಘಾತಗಳು ಉಂಟಾಗುತ್ತಿದ್ದು, ಅದರಲ್ಲಿ 59 ಸಾವುಗಳು ಸಂಭವಿಸಿದ್ದವು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾ ಪೋಲಿಸ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿದ್ದರು.
ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬಳ್ಳಾರಿ, ಬೂದಗುಂಪಾ ಕ್ರಾಸ್, ಅಮರೇಶ್ವರ ದೇವಸ್ಥಾನ ಕ್ರಾಸ್, ತುಂಗಭದ್ರಾ ನದಿ ಸೇತುವೆ-1 ಹತ್ತಿರ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ವಾಹನಗಳ ಅತಿಯಾದ ವೇಗವಾದ ಸಂಚಾರವೇ ಕಾರಣ ಎಂಬುದು ತಿಳಿದಿರುತ್ತದೆ. ಈ ಹಿನ್ನೆಲೆಯಲ್ಲಿ ಅಪಘಾತ ವಲಯವಾದ ಈ ಸ್ಥಳಗಳಲ್ಲಿ ಅನುಮತಿಸಿದ ವೇಗಕ್ಕಿಂತ ಹೆಚ್ಚು ವೇಗವಾಗಿ ಸಂಚರಿಸುವ ವಾಹನಗಳ ಮೇಲೆ ನಿಯಂತ್ರಣ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಾಹನ ವೇಗ ನಿಯಂತ್ರಣ ಮಾಡಲು ಸೆಕ್ಯೂರಿಟಿ ಸಿಸ್ಟಮ್ & ಸಿಸಿಟಿವಿ ಅಳವಡಿಕೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತೀನ್ ಗಡ್ಕರಿಗೆ ಮನವಿ ಮಾಡಿದ್ದು, ಇದಕ್ಕಾಗಿ ರೂ. 2 ಕೋಟಿ 5 ಲಕ್ಷಗಳನ್ನು ಮಂಜೂರು ಮಾಡಿದ್ದಾರೆ. ಇದರಲ್ಲಿ ರೂ. 1 ಕೋಟಿ 39 ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಹೆಚ್.ಎ.ಐ) ವತಿಯಿಂದ ವಣಬಳ್ಳಾರಿ, ಬೂದಗುಂಪಾ ಕ್ರಾಸ್, ಅಮರೇಶ್ವರ ದೇವಸ್ಥಾನ ಕ್ರಾಸ್, ತುಂಗಭದ್ರಾ ನದಿ ಸೇತುವೆ-1 ಮತ್ತು ಮುನಿರಾಬಾದ್ ಪೋಲಿಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.
ರೂ. 70 ಲಕ್ಷ ವೆಚ್ಚದಲ್ಲಿ ಜಂಕ್ಷನ್ ಸ್ಥಳಗಳಲ್ಲಿ ಬೆಳಕಿನ ಸೌಲಭ್ಯ ಒದಗಿಸಲು ತುಂಗಭದ್ರಾ ನದಿ ಸೇತುವೆ-1, ಅಮರೇಶ್ವರ ದೇವಸ್ಥಾನ ಕ್ರಾಸ್, ವಣಬಳ್ಳಾರಿ, ಬೇವೂರ ಕ್ರಾಸ್, ಹಿರೇವಂಕಲಕುಂಟಾ, ತುಂಗಭದ್ರಾ ನದಿ ಸೇತುವೆ-2, ಈ ಸ್ಥಳಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸ ಮಾಡಲಾಗುತ್ತಿದೆ. ಸಿಸಿಟಿವಿ ಅಳವಡಿಕೆಯಿಂದ ಅಪರಾಧಗಳನ್ನು ತಡೆಗಟ್ಟಲು, ಅಪಘಾತಕ್ಕೀಡಾದ ಮತ್ತು ಓಡಿಹೋದ ಪ್ರಕರಣಗಳಲ್ಲಿ ವಾಹನಗಳನ್ನು ಪತ್ತೆಹಚ್ಚಲು, ರಸ್ತೆ ಅಪಘಾತಗಳನ್ನು ತಪ್ಪಿಸಲು ಅತಿ ವೇಗವನ್ನು ಪರಿಶೀಲಿಸಲು ಸಮಗ್ರ ಕಣ್ಣಾವಲು ಮತ್ತು ಮೇಲ್ವಿಚಾರಣೆ ಮಾಡಲು ಪೊಲೀಸ್ ಇಲಾಖೆಗೆಗೆ ಅನುಕೂಲವಾಗಲಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಯೋಜನೆಗಳು
- ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ರೂ. 28.89 ಕೋಟಿ ವೆಚ್ಚದಲ್ಲಿ ಮೆತಗಲ್ ಕ್ರಾಸ್, ರೂ. 27.28 ಕೋಟಿ ವೆಚ್ಚದಲ್ಲಿ ಶಹಪೂರ, ರೂ. 19.43 ಕೋಟಿ ವೆಚ್ಚದಲ್ಲಿ ಹಿಟ್ನಾಳ ಕ್ರಾಸ್ ಮತ್ತು ರೂ. 29.04 ಕೋಟಿ ವೆಚ್ಚದಲ್ಲಿ ಹುಲಗಿ ಕ್ರಾಸ್ ಸೇರಿದಂತೆ ಒಟ್ಟು ರೂ.104.64 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಾಲ್ಕು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
- ರಾಷ್ಟ್ರೀಯ ಹೆದ್ದಾರಿ-150ಎ ರಲ್ಲಿ ತೆಕ್ಕಲಕೋಟೆಯಿಂದ ಸಿರಗುಪ್ಪ ಪಟ್ಟಣದ ಮೂಲಕ ಇಬ್ರಾಹಿಮ್ರವರೆಗೆ ರೂ.72 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
- ರಾಷ್ಟ್ರೀಯ ಹೆದ್ದಾರಿ-367 (ಭಾನಾಪೂರ-ಗದ್ದನಕೇರಿ ಕ್ರಾಸ್)ನ್ನು ರಾಷ್ಟ್ರೀಯ ಹೆದ್ದಾರಿ-50ಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ 2025-26ನೇ ಸಾಲಿನ ಬಜೆಟ್ನಲ್ಲಿ ಕಾಮಗಾರಿ ಅನುಮೋದನೆಯಾಗಿರುತ್ತದೆ. ಡಿಪಿಆರ್ ತಯಾರಿಸುವ ಹಂತದಲ್ಲಿರುತ್ತದೆ.
- ಒನ್ ಟೈಮ್ ಇಂಪ್ರುಮೆಂಟ್ ರೋಡ್ (One Time Improvement Road) ಕೊಪ್ಪಳ ಪಟ್ಟಣದಲ್ಲಿ ಯೋಜನೆಯಡಿಯಲ್ಲಿ ಅಭಯ್ ಸಾಲವೆಂಟ್ದಿಂದ ಹೊಸಪೇಟೆ ರಸ್ತೆವರೆಗಿನ ಸೇತುವೆ ವರೆಗೆ ಮತ್ತು ಶಿಲ್ಪಾ ಗ್ರಾಂಡ್ ಹೋಟೆಲ್ನಿಂದ ದದೇಗಲ್ ಹತ್ತಿರ ಇರುವ ಸೇತುವೆ ವರೆಗೆ ರಸ್ತೆ ನಿರ್ಮಾಣ ಮಾಡುವುದು.
- ಸಿರಗುಪ್ಪ ಪಟ್ಟಣದಲ್ಲಿ “ಒನ್ ಟೈಮ್ ಇಂಪ್ರುಮೆಂಟ್ ರೋಡ್ ನಿರ್ಮಾಣ ಮಾಡಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಅನುಮೋದನೆ ಹಂತದಲ್ಲಿರುತ್ತದೆ.