ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಮೂಲ ಮತದಾರರಿಗೆ ಗೊತ್ತಾಗದಂತೆ ಅವರ ಹೆಸರು ಕೈಬಿಡುವಂತೆ ಆನ್ಲೈನ್ ಅರ್ಜಿ ಸಲ್ಲಿಸಿರುವ ಬಗ್ಗೆ ಸಿಐಡಿ ತನಿಖೆಗೊಳಪಡಿಸಿದ್ದರೂ ತಾರ್ಕಿಕ ಅಂತ್ಯಕ್ಕೆ ಬಂದು ತಲುಪಿಲ್ಲ. ಹೀಗಾಗಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಮತದಾರರ ಪಟ್ಟಿ ಪರಿಷ್ಕರಣೆಯ ಮತಗಳ್ಳತನ ಅಭಿಯಾನಕ್ಕೆ ಇದು ತಾಜಾ ನಿದರ್ಶನವಾಗಿದೆ ಎಂದು ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿದರೂ ರಾಜ್ಯ ಚುನಾವಣಾ ಆಯೋಗವು ಬೆಂಬಲಿಸುತ್ತಿಲ್ಲ. ಇದರಿಂದ ಯಾವ ಕಂಪ್ಯೂಟರ್ನಿಂದ ಅರ್ಜಿ ಸಲ್ಲಿಸಲಾಗಿದೆ ಎಂಬು ಐಪಿ ವಿಳಾಸ ಮತ್ತು ಪೋರ್ಟ್ ವಿವರ ಲಭ್ಯವಿಲ್ಲದ ಕಾರಣದಿಂದ ವಂಚನೆಯ ತಾಂತ್ರಿಕ ಪತ್ತೆ ಹಚ್ಚುವಿಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಸೈಬರ್ ವಿಭಾಗಕ್ಕೆ ಕೇಸ್ ಸ್ಥಳಾಂತರಿಸಲಾಗಿದೆ.
ಕಾಂಗ್ರೆಸ್ ನವದೆಹಲಿಯ ಕೇಂದ್ರ ಕಚೇರಿಯ ಸಂವಹನ ವಿಭಾಗದಿಂದ ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಎಲ್ಲ ಪೂರಕ ದಾಖಲಾತಿಗಳು ಸಲ್ಲಿಕೆ ಮಾಡಿವೆ. ಆದರೆ ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುವೆ. ವೈಯಕ್ತಿಕವಾಗಿ ತಾವು ಒಬ್ಬ ವಕೀಲರಾಗಿದ್ದರಿಂದ ಇದನ್ನು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗಿರುವುದು ಸೂಕ್ತ ಎಂದರು.
ಪ್ರಕರಣದ ಹಿನ್ನೆಲೆ ಏನು?: 9 ಫೆಬ್ರವರಿ 2022 ರಿಂದ 20 ಫೆಬ್ರವರಿ 2023ರವರೆಗೆ ನಮೂನೆ-7 ಅಡಿಯಲ್ಲಿ ಒಟ್ಟು 1,018 ಅರ್ಜಿಗಳು ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡುವಂತೆ ವಿವಿಧ ಆ್ಯಪ್ಗಳ ಮೂಲಕ ಅರ್ಜಿ ಸ್ವೀಕೃತಗೊಂಡಿವೆ.
ಅರ್ಜಿ ಆಧಾರವಾಗಿಟ್ಟುಕೊಂಡು ನಿಯಮಾನುಸಾರ ಪರಿಗಣಿಸಿ 24 ಅರ್ಜಿಗಳನ್ನು ಮಾತ್ರ ಪರಸ್ಕರಿಸಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಉಳಿದ 5,994 ಅರ್ಜಿಗಳ ಕುಲಂಕಷವಾಗಿ ಅಂದಿನ ಸಹಾಯಕ ಚುನಾವಣಾಧಿಕಾರಿ ಮಮತಾ ಕುಮಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ತಹಸೀಲ್ದಾರರು ಪರಿಶೀಲಿಸಿ ತೀವ್ರ ವಿಚಾರಿಸಿದ್ದಾಗ ರಾಜಕೀಯ ದುರುದ್ದೇಶದಿಂದ ಮೂಲ ಮತದಾರರಿಗೆ ಗೊತ್ತಾಗದಂತೆ ಅವರ ಹೆಸರು ರದ್ದುಪಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದು ಗೊತ್ತಾಗಿದೆ.
ಇಲ್ಲಿ ಅರ್ಜಿದಾರರ ಸಹಿ, ಬೆರಳಚ್ಚು ಇಲ್ಲ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತೆಗೆದು ಹಾಕಲು ಗುರಿಯಾಗಿದ್ದ ಹೆಸರುಗಳು ವಿವಿಧ ಗ್ರಾಮಗಳ ಮತದಾರರ ಪಟ್ಟಿಯ ಮೊದಲನೇ ಕ್ರಮ ಸಂಖ್ಯೆ ಎಂಬ ಅಂಶ ಬಯಲಾಗಿದೆ. ಒಂದು ವೇಳೆ ತಾವು ಎಚ್ಚರವಹಿಸದಿದ್ದರೆ 2023ರ ಚುನಾವಣೆಯಲ್ಲಿ ಸೋಲಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು.
ಈ ಪ್ರಕರಣ ಬೆನ್ನು ಹತ್ತಿ ಸಿಐಡಿ ತನಿಖೆಗೆ ಒಪ್ಪಿಸಿದರೂ ಆರಂಭದಲ್ಲಿ ರಾಜ್ಯ ಚುನಾವಣಾ ಆಯೋಗ ಪೂರಕ ಮಾಹಿತಿ ಒದಗಿಸಿತು. ಈಗ ರಾಜ್ಯ ಚುನಾವಣಾ ಆಯೋಗ ವಿವರ ನೀಡಲು ನಿರಾಕರಿಸುತ್ತಿದೆ ಎಂದರೆ ಬಿಜೆಪಿ ಅಭ್ಯರ್ಥಿ ಮಧ್ಯೆ ಒಳಸಂಚು ಇದೆ ಎಂಬ ಶಂಕಾಸ್ಪದವಾಗಿದೆ.
ಎನ್ಜಿಓ ಸಂಸ್ಥೆಗಳು ಮಾಡಿರುವ ಕುತಂತ್ರ ಬಗ್ಗೆ ಬಯಲಾಗಬೇಕು ಎಂದು ಒತ್ತಾಯಿಸಿದರು. ಅಲ್ಲದೆ 2018ರ ಚುನಾವಣೆಯಲ್ಲೂ ಕೇವಲ 678 ಮತಗಳ ಅಂತರದಿಂದ ಪರಾಭವಗೊಂಡಿದೆ. ಹೀಗಾಗಿ ಆ ಅವಧಿಯಲ್ಲೂ ಮತಗಳ್ಳತನವಾಗಿರುವ ಬಗ್ಗೆ ಅನುಮಾನ ಮೂಡಿದೆ ಎಂದರು.