ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳು ಮಾರ್ಗಸೂಚಿ, ನಿಯಮಾವಳಿಗಳನ್ನು ಮೀರಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಎಸಗಿರುವದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇದೀಗ ತನಿಖೆಗೆ ಆದೇಶ ಮಾಡಲಾಗಿದೆ.
ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಗ್ರಾಮಗಳಲ್ಲಿ ವಾಸಿಸುತ್ತಿರುವ ಅರಣ್ಯ ನಿವಾಸಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಅವ್ಯವಹಾರವನ್ನು ಹಿಂದಿನ ಅಧಿಕಾರಿಗಳು ಮಾಡಿದ್ದಾರೆನ್ನುವ ಆರೋಪ ಕೇಳಿಬಂದಿದೆ. 152 ಕೋಟಿ ರೂಪಾಯಿ ವೆಚ್ಚದ ಅರಣ್ಯ ನಿವಾಸಿಗಳ ಪುನರ್ ವಸತಿ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ, ಗ್ರಾಮವಾಸಿಗಳ ಅಕ್ರಮ ಪುನರ್ವಸತಿ ನಡೆದಿದೆ. ಎನ್ನುವ ಆರೋಪದ ಹಿನ್ನಲೆಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತನಿಖೆಗೆ ಆದೇಶ ಮಾಡಿದೆ.
ಸಾಮಾಜಿಕ ಹೋರಾಟಗಾರ ವಿ.ಎಂ. ಪ್ರಮೋದ ಅವರ ದೂರಿನ ಮೇಲೆ ರಾಜ್ಯದ ಪಿ.ಸಿ.ಸಿ.ಎಫ್. (ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದೆ. ದೂರುದಾರರ ಮನವಿಯನ್ನು ರಾಜ್ಯ ಪೂರಕ ಅರಣ್ಯೋತ್ಪಾದನಾ ನಿಧಿ ನಿರ್ವಹಣಾ ಮತ್ತು ಯೋಜನಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕರಿಗೂ ಕಳಿಸಿದ್ದು, ತುರ್ತು ಆದ್ಯತೆಯ ಮೇರೆಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.