ಜಿಕೆವಿಕೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೂವಿನ ಮಾರುಕಟ್ಟೆಗೂ ಮತ್ತು ನಗರದಲ್ಲಿರುವ ಕೆ.ಆರ್.ಮಾರ್ಕೆಟ್ನ ಹೂವು ಮಾರುಕಟ್ಟೆ ಸ್ಥಳಾಂತರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೌತ್ ಇಂಡಿಯಾ ಫ್ಲವರ್ ಆಸೋಸಿಯೇಷನ್ ಅಧ್ಯಕ್ಷ ಟಿ.ಎಂ.ಅರವಿಂದ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಕೆವಿಕೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಾರುಕಟ್ಟೆಯು ದೇಶದ ಹಾಗೂ ವಿಶ್ವದ ಇತರೆ ಭಾಗಗಳಿಗೆ ಕಳುಹಿಸುವ ಕಟ್ ಫ್ಲವರ್ ಮಾರುಕಟ್ಟೆಯಾಗಿದೆ. ಇದಕ್ಕೆ ಗುರುತಿಸಲಾಗಿರುವ ಜಾಗ ಪ್ರಶಸ್ತವಾಗಿದೆ” ಎಂದರು.
“ಮರಗಳನ್ನು ಉಳಿಸಿಕೊಂಡೇ ಮಾರುಕಟ್ಟೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಜಿಕೆವಿಕೆಯಲ್ಲಿ 5 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು, ಇಲ್ಲಿ 900 ಮರಗಳನ್ನು ಕಡಿತ ಮಾಡುತ್ತಿರುವುದಾಗಿ ಸುಳ್ಳು ಸುದ್ದಿ ಹರಡಲಾಗಿದೆ” ಎಂದು ತಿಳಿಸಿದರು.
“ಮರಗಳನ್ನು ಉಳಿಸಿಕೊಂಡೇ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಮರಗಳನ್ನು ಕಡಿಯುತ್ತಿಲ್ಲ. ಪರಿಸರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗುತ್ತಿಲ್ಲ. ಲಕ್ಷಾಂತರ ಹೂವು ಬೆಳೆಗಾರರ ಹಿತ ದೃಷ್ಟಿಯಿಂದ ಹೂವಿನ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ರೈತರ ಬಹಳ ದಿನಗಳ ಕನಸು ಇದೀಗ ನನಸಾಗುತ್ತಿದೆ” ಎಂದು ಹೇಳಿದರು.
“ಬೆಂಗಳೂರು ಸುತ್ತಮುತ್ತ ಶಾಶ್ವತ ಮಾರು ಕಟ್ಟೆ ಇಲ್ಲ. ಬೆಂಗಳೂರು, ದೊಡ್ಡಬಳ್ಳಾಪುರ, ಆನೇಕಲ್, ಹೊಸಕೋಟೆ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೋಲಾರ ಭಾಗದಲ್ಲಿ ರೈತರು ಬೆಳೆದ ಹೂವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ರೈಲ್ವೆ, ವಾಯುಮಾರ್ಗ, ರಸ್ತೆ ಸಾರಿಗೆ ಎಲ್ಲದಕ್ಕೂ ಜಿಕೆವಿಕೆ ಪ್ರಶಸ್ತವಾದ ಸ್ಥಳವಾಗಿದೆ. ಇದಕ್ಕಾಗಿ ಸರ್ಕಾರ 100 ಕೋಟಿ ರೂ. ಯೋಜನೆ ರೂಪಿಸಿದ್ದು, 25 ಕೋಟಿ ರೂ. ಬಿಡುಗಡೆಯಾಗಿದೆ” ಎಂದು ಮಾಹಿತಿ ನೀಡಿದರು.