ಬಾಗಲಕೋಟೆ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ೯೬೩(೨೭ ಕೆಜಿ) ಬೆಳ್ಳಿದೀಪಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಚಿವ ಮುರುಗೇಶ ನಿರಾಣಿ ಅವರ ಒಡೆತನದ ಸಕ್ಕರೆ ಕಾರ್ಖಾನೆ ಆವರಣದ ಸಿಬ್ಬಂದಿ ವಸತಿ ಗೃಹದಲ್ಲಿ ಮದ್ಯ ಶೇಖರಿಸಲಾಗಿದೆ ಎಂಬ ದೂರು ಆಧರಿಸಿ ಅಧಿಕಾರಿಗಳು ದಾಳಿಗೆ ತೆರಳಿದ ವೇಳೆ ಬೆಳ್ಳಿಯಂತೆ ತೋರುವ ದೀಪಗಳು ಪತ್ತೆಯಾಗಿವೆ. ಬೆಳ್ಳಿಯದಾದಲ್ಲಿ ೨೧ ಲಕ್ಷ ರೂ. ಬೆಲೆಬಾಳುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಮುಧೋಳ ಠಾಣಾ ವ್ಯಾಪ್ತಿಯಲ್ಲಿ ಸಚಿವ, ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಅವರ ಮೇಲೆ ದೂರು ದಾಖಲಿಸಲಾಗಿದೆ.
ಶುಕ್ರವಾರ ಸಂಜೆ ದಾಳಿ ನಡೆದಿದ್ದು, ಅಧಿಕಾರಿಗಳು ೯೬೩ ಕಾಮಾಕ್ಷಿ ದೀಪಗಳನ್ನು ವಶಕ್ಕೆ ಪಡೆದಿದ್ದಾರೆ. ನೈಜ ಬೆಳ್ಳಿಯದ್ದೋ, ಅಥವಾ ಬೇರೆಯದ್ದೋ ಎಂಬುದನ್ನು ಪರೀಕ್ಷಿಸಿ ನೋಡಬೇಕಿದೆ. ಈ ಬೆಳ್ಳಿ ದೀಪಗಳ ಬಾಕ್ಸ್ಗಳ ಮೇಲೆ ಸಂತರು, ದಾರ್ಶನಿಕರ ಭಾವಚಿತ್ರಗಳನ್ನು ಮುದ್ರಿಸಲಾಗಿದ್ದು, ಕೆಳ ಭಾಗದಲ್ಲಿ ಸಚಿವ ಮುರುಗೇಶ ನಿರಾಣಿ ಅವರ ಭಾವಚಿತ್ರವಿದೆ.
ಸಚಿವ ನಿರಾಣಿ ಅವರ ಒಡೆತನದ ಫ್ಯಾಕ್ಟರಿ ಉದ್ಯೋಗಿಗಳ ಕಟ್ಟಡದಲ್ಲಿ ಇಷ್ಟು ಪ್ರಮಾಣದಲ್ಲಿ ಸಾಮಗ್ರಿಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಸಚಿವರು ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿದೆ.