ವಿಜಯಪುರ: ಇದೀಗ ಬಂದ ಸುದ್ದಿ…. ಜೆಸಿಬಿ ಪಕ್ಷದ ಅಭ್ಯರ್ಥಿಯಿಂದ 31 ಸಾವಿರ ಮತಗಳ ಅಂತರದಿಂದ ಸಚಿವ ಎಂ.ಬಿ. ಪಾಟೀಲ ಹಿನ್ನೆಡೆ ಸಾಧಿಸಿದ್ದಾರೆ… ಮತ್ತೊಂದು ಬ್ರೇಕಿಂಗ್ ನ್ಯೂಸ್… ಜೆಸಿಬಿ ಅಭ್ಯರ್ಥಿಯಿಂದ 60 ಸಾವಿರ ಮತಗಳ ಅಂತರದಿಂದ ಸಚಿವ ಎಂ.ಬಿ. ಪಾಟೀಲರು ಪರಭಾವಗೊಂಡಿದ್ದಾರೆ….
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಥಾಪಿಸುವ ಜೆಸಿಬಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಸಚಿವ ಎಂ.ಬಿ. ಪಾಟೀಲರನ್ನು ಸೋಲಿಸುವ ಕಾಲ ಬರುವುದು ದೂರವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬ್ರೇಕಿಂಗ್ ನ್ಯೂಸ್ ಮಾದರಿಯಲ್ಲಿ ವಿಭಿನ್ನ ರೀತಿಯಲ್ಲಿ ಟಾಂಗ್ ನೀಡುವ ಪ್ರಯತ್ನ ಮಾಡಿದರು.
ಇದೀಗ ಬಂದ ಸುದ್ದಿ ಜೆಸಿಬಿ ಅಭ್ಯರ್ಥಿ ಎಂಬಿಪಿ ಅವರಿಂದ ಮುಂದಿದ್ದಾರೆ, ಇನ್ನೂ ಕೆಲವು ಕ್ಷಣಗಳ ನಂತರ ಜೆಸಿಬಿ ಅಭ್ಯರ್ಥಿ 60 ಸಾವಿರ ಮತಗಳ ಅಂತರದಿಂದ ಎಂಬಿಪಿ ವಿರುದ್ಧ ಗೆಲವು ಸಾಧಿಸಲಿದ್ದಾರೆ, ಈ ರೀತಿಯ ನ್ಯೂಸ್ ಕೇಳುವ ದಿನಗಳು ದೂರವಿಲ್ಲ ಎಂದರು.
ಡಿಎಂಕೆ, ಎಐಡಿಎಂಕೆಯಂತಹ ಪಕ್ಷಗಳು ಮಣ್ಣು ಮುಕ್ಕಿವೆ, ಯಾವ ರೀತಿ ವಿಜಯ್ಗೆ ಮಣೆ ಹಾಕಿದರೋ ಆ ರೀತಿ ನನ್ನನ್ನು ಮಣೆ ಹಾಕುವ ದಿನಗಳು ದೂರವಿಲ್ಲ ಎಂದರು.
ಭಾರೀ ಪರಭಾವದತ್ತ ಡಿ.ಕೆ. ಶಿವಕುಮಾರ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ತೀವ್ರ ಮುಖಭಂಗ, ಜೆಸಿಬಿ ಪಕ್ಷ ಬಹುಮತದತ್ತ ದಾಪುಗಾಲು, ಯತ್ನಾಳ ಮುಖ್ಯಮಂತ್ರಿ ಫಿಕ್ಸ್…. ಎನ್ನುವ ಬ್ರೇಕಿಂಗ್ ನ್ಯೂಸ್ ಕೇಳಿ ಬರಲಿದೆ ಎಂದರು.
ಈ ಹಿಂದೆ ಮುಸಲ್ಮಾನರ ಟೋಪಿ ಹಾಕಿ ಪ್ರಾಯಶ್ಚಿತವಾಗಿದೆ, ಆ ಕಾರಣಕ್ಕಾಗಿಯೇ ತಲೆ ಬೋಳಿಸಿಕೊಂಡು ಗಂಗಾಸ್ನಾನ ಮಾಡಿ ಬಂದಿರುವೆ, ಎಷ್ಟು ಸಾರಿ ಅರೇ ಆ ಮಾತು ಹೇಳುತ್ತೀರಿ? ಸಿದ್ದರಾಮಯ್ಯ ಅವರ ವಿರುದ್ಧ ತಾವು ನಡೆದುಕೊಂಡಿಲ್ಲ ಎಂದು ಆತ್ಮಸಾಕ್ಷಿ ಮುಟ್ಟಿಕೊಂಡು ಹೇಳಿಕೊಳ್ಳಲಿ, ಅಷ್ಟು ಹೇಳಿದರೆ ಮುಗಿಯುತ್ತಿತ್ತು, ನನ್ನ ವಿರುದ್ಧ ಏಕವಚನದ ವಾಗ್ದಾಳಿ ಅವಶ್ಯಕತೆಯೇ ಇರಲಿಲ್ಲ ಎಂದರು.





















