ದಾವಣಗೆರೆ: ನಗರದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಶುಕ್ರವಾರ ತೀವ್ರ ತಪಾಸಣೆ ನಡೆಸಿದರು. ತಪಾಸಣೆ ನಂತರ ಇದೊಂದು ಹುಸಿ ಬಾಂಬ್ ಕೆರೆ ಎಂದು ಸ್ಪಷ್ಟಪಡಿಸಲಾಯಿತು.
ನಗರದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂದು ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಬಂದಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳದ ತಂಡಗಳು ನ್ಯಾಯಾಲಯದ ಸಂಕಿರ್ಣಕ್ಕೆ ಆಗಮಿಸಿ ನ್ಯಾಯಾಲಯದ ಪ್ರತಿ ಕೊಠಡಿ, ನ್ಯಾಯಾಲಯಗಳು, ವಕೀಲರ ಭವನ, ಶೌಚಾಲಯ ಹೀಗೆ ಯಾವುದನ್ನೂ ಬಿಡದೆ, ಮೂಲೆ ಮೂಲೆಯಲ್ಲಿ ಬಾಂಬ್ಗಾಗಿ ಶೋಧ ಕೈಗೊಂಡರು. ಯಾವುದೇ ಬಾಂಬ್ ಸಿಕ್ಕಿಲ್ಲ. ಕೊನೆಗೆ ಇದೊಂದು ಹುಸಿ ಬಾಂಬ್ ಎಂದು ಹೇಳಲಾಯಿತು.
ದಾವಣಗೆರೆ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ವಿವಿಧ ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಹಾಕಲಾಗಿದೆ. 23 ಸೈನೈಡ್ ಬಾಂಬ್ ಸ್ಪೋಟಿಸುವುದಾಗಿ ಇ-ಮೇಲ್ನಲ್ಲಿ ಅಜ್ಞಾತ ವ್ಯಕ್ತಿ ಹಾಕಿದ್ದಾನೆ. ನ್ಯಾಯಾಲಯದಲ್ಲಿ ಟೈಮ್ ಬಾಂಬ್ ಇಟ್ಟಿದ್ದು, ಮಧ್ಯಾಹ್ನ 2 ಗಂಟೆಗೆ ಸ್ಫೋಟವಾಗುತ್ತದೆಂಬುದಾಗಿ ಅಪರಿಚಿತ ವ್ಯಕ್ತಿ ಇ-ಮೇಲ್ನಲ್ಲಿ ಎಚ್ಚರಿಸಿದ್ದನು. 23 ಸೈನೈಡ್ ವಾಯು ಗುಂಡಿಗಳು ಸ್ಫೋಟವಾಗಲಿವೆ ಎಂದು ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ನಕಲಿ ಡೊಮೇನ್ನಿಂದ ಮೇಲ್ ಬಂದಿದ್ದರೂ, ಪೊಲೀಸರು ಅಲರ್ಟ್ ಆಗಿ, ಇಡೀ ನ್ಯಾಯಾಲಯವನ್ನು ತಪಾಸಣೆ ಮಾಡಿದರೂ ಯಾವುದೇ ಸ್ಫೋಟಕವಾಗಲಿ, ಟೈಂ ಬಾಂಬ್ ಆಗಲಿ ಪತ್ತೆಯಾಗಲಿಲ್ಲ. ತಮಿಳುನಾಡು ಶಿವಗಂಗೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಅಜಿತ್ ಕುಮಾರನ ಸಾವಿಗೆ ಪ್ರತೀಕಾರ ಎಂಬುದಾಗಿ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಉದಯನಿಧಿ ಎಂಬಾತನ ಉಪಪತ್ನಿ, ಮಗನ ಬಂಧನಕ್ಕೂ ಇ-ಮೇಲ್ನಲ್ಲಿ ಆಗ್ರಹಿಸಲಾಗಿದೆ. ನಿನ್ನೆ ನಡೆದಿದ್ದು ಪರೀಕ್ಷೆ, ಇಂದು ನಡೆಯುವುದು ನಿಜ ಎಂಬುದಾಗಿ ಅಪರಿಚಿತ ವ್ಯಕ್ತಿ ಇ-ಮೇಲ್ನಲ್ಲಿ ಬೆದರಿಕೆ ಹಾಕಿದ್ದನು. ಶುಕ್ರವಾರ ಬೆಳಗ್ಗೆ 7.47ಕ್ಕೆ ಏಕಕಾಲಕ್ಕೆ ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಮೇಲ್ ಬಂದಿದ್ದು, ಇಂತಹ ಹುಸಿ ಬಾಂಬ್ ಬೆದರಿಕೆ ಹಾಕಿ, ನ್ಯಾಯ ಕಲಾಪಕ್ಕೆ ಅಡ್ಡಿಪಡಿಸುವ, ನ್ಯಾಯಾಂಗದ ಬಹುಮೌಲ್ಯದ ಸಮಯವನ್ನು ವ್ಯರ್ಥ ಮಾಡಿಸುತ್ತಿರುವ ಕಿಡಿಗೇಡಿಗಳನ್ನು ಮಟ್ಟ ಹಾಕುವಂತೆ ವಕೀಲರು ಒತ್ತಾಯಿಸಿದ್ದಾರೆ.





















