SK Home Ad
Home ಸುದ್ದಿ ರಾಜ್ಯ ಮಾವು ಬೆಲೆ ಕುಸಿತ: PDPS ಜಾರಿಗೆ ಕೇಂದ್ರಕ್ಕೆ ಕುಮಾರಸ್ವಾಮಿ ಮನವಿ

ಮಾವು ಬೆಲೆ ಕುಸಿತ: PDPS ಜಾರಿಗೆ ಕೇಂದ್ರಕ್ಕೆ ಕುಮಾರಸ್ವಾಮಿ ಮನವಿ

0
59

ಮಾವು ಬೆಳೆಗಾರರಿಗೆ ನೆರವು ನೀಡಲು ಕೇಂದ್ರಕ್ಕೆ ಆಗ್ರಹ; ಶಿವರಾಜ್ ಸಿಂಗ್ ಚೌಹಾಣ್‌ಗೆ ಕುಮಾರಸ್ವಾಮಿ ಮನವಿ

ಬೆಂಗಳೂರು: ರಾಜ್ಯದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತ ಮತ್ತು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ 2026-27ನೇ ಸಾಲಿಗೆ ಕರ್ನಾಟಕದ ಮಾವು ಬೆಳೆಗಾರರಿಗೆ ಬೆಲೆ ಕೊರತೆ ಪಾವತಿ ಯೋಜನೆ (Price Deficiency Payment Scheme – PDPS) ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ H. D. ಕುಮಾರ್‌ಸ್ವಾಮಿ ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ರಾಜ್ಯದ ಸಾವಿರಾರು ಮಾವು ಬೆಳೆಗಾರರು ಮಾರುಕಟ್ಟೆ ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗಮನ ಸೆಳೆದಿದ್ದಾರೆ. ರೈತರಿಗೆ ನ್ಯಾಯಯುತ ಆದಾಯ ದೊರೆಯುವಂತೆ ಮಾಡಲು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ ಪಿಡಿಪಿಎಸ್ ಅನ್ನು ವಿಸ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 232 ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮುಂಬಡ್ತಿ

ಕರ್ನಾಟಕ ಪ್ರಮುಖ ಮಾವು ಉತ್ಪಾದಕ ರಾಜ್ಯ : ಕರ್ನಾಟಕ ದೇಶದ ಪ್ರಮುಖ ಮಾವು ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆದಿದ್ದು, ಸುಮಾರು 10 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳು ಪ್ರಮುಖ ಮಾವು ಉತ್ಪಾದನಾ ಕೇಂದ್ರಗಳಾಗಿವೆ. ಈ ಭಾಗಗಳಲ್ಲಿನ ಸಾವಿರಾರು ರೈತ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಮಾವು ತೋಟಗಾರಿಕೆಯನ್ನು ಅವಲಂಬಿಸಿವೆ.

ಇದನ್ನೂ ಓದಿ: ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆ : ಮಾರುಕಟ್ಟೆಯ ಏರಿಳಿತಗಳು, ಬೇಡಿಕೆ-ಪೂರೈಕೆ ಅಸಮತೋಲನ ಹಾಗೂ ಕಾಲೋಚಿತ ಸಮಸ್ಯೆಗಳ ಪರಿಣಾಮವಾಗಿ ರೈತರು ತಮ್ಮ ಉತ್ಪನ್ನವನ್ನು ಲಾಭದಾಯಕ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕ ಕೃಷಿ ಬೆಲೆ ಆಯೋಗದ ಅಂದಾಜಿನ ಪ್ರಕಾರ, ಮಾವು ಬೆಳೆಯುವ ಒಟ್ಟು ವೆಚ್ಚ (C-3 ವೆಚ್ಚ) ಪ್ರತಿ ಕ್ವಿಂಟಲ್‌ಗೆ ಸುಮಾರು ₹3,951 ಆಗಿದೆ. ಆದರೆ ಪ್ರಸ್ತುತ ಮಾರುಕಟ್ಟೆ ಬೆಲೆಗಳು ಇದಕ್ಕಿಂತ ಸಾಕಷ್ಟು ಕಡಿಮೆಯಾಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: NEET ಮರುಪರೀಕ್ಷೆಗೂ ಮುನ್ನ ಅಭ್ಯರ್ಥಿ ರಿಯಾ ಕುಮಾರಿ ಆತ್ಮಹತ್ಯೆ

ರೈತರಿಗೆ ಆರ್ಥಿಕ ಹೊರೆ : ಮಾವು ತೋಟಗಳ ನಿರ್ವಹಣೆಗೆ ರೈತರು ನೀರಾವರಿ, ಗೊಬ್ಬರ, ಕಾರ್ಮಿಕ ವೆಚ್ಚ, ಕೀಟನಾಶಕ, ಕೊಯ್ಲು ಮತ್ತು ಸಾಗಾಣಿಕೆ ಸೇರಿದಂತೆ ಹಲವು ಅಂಶಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗದಿರುವುದರಿಂದ ಅವರ ಆದಾಯ ಕುಸಿದಿದೆ.

ಕಡಿಮೆ ಬೆಲೆಗಳಿಂದ ರೈತರಿಗೆ ಗಣನೀಯ ಆರ್ಥಿಕ ನಷ್ಟ ಉಂಟಾಗಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಿಡಿಪಿಎಸ್ ಜಾರಿಯಿಂದ ಆದಾಯ ರಕ್ಷಣೆ : ಬೆಲೆ ಕೊರತೆ ಪಾವತಿ ಯೋಜನೆಯಡಿ ಮಾರುಕಟ್ಟೆ ಬೆಲೆ ಮತ್ತು ಸರ್ಕಾರ ನಿಗದಿಪಡಿಸುವ ಲಾಭದಾಯಕ ಬೆಲೆಯ ನಡುವಿನ ವ್ಯತ್ಯಾಸವನ್ನು ರೈತರಿಗೆ ಪಾವತಿಸಲಾಗುತ್ತದೆ. ಇದರಿಂದ ರೈತರಿಗೆ ಆದಾಯ ರಕ್ಷಣೆ ದೊರೆಯುವ ಜೊತೆಗೆ ಬೆಲೆ ಕುಸಿತದ ಪರಿಣಾಮವನ್ನು ತಗ್ಗಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: G7 ಸಭೆಯಲ್ಲಿ ಮೆಲೋಡಿ ಜೋಡಿ: ಮೋದಿ–ಮೆಲೋನಿ ಭೇಟಿಯ Video ವೈರಲ್

ವಿಶೇಷವಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದಂತಹ ಮಾವು ಉತ್ಪಾದಕ ಜಿಲ್ಲೆಗಳಲ್ಲಿ ರೈತರ ಆದಾಯವನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದೊಂದಿಗೆ ಕ್ರಮ ಕೈಗೊಳ್ಳಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮನವಿ : “ರೈತರ ಮತ್ತು ತೋಟಗಾರಿಕಾ ಕ್ಷೇತ್ರದ ಹಿತದೃಷ್ಟಿಯಿಂದ ಈ ವಿಷಯವನ್ನು ಸಹಾನುಭೂತಿಯಿಂದ ಪರಿಗಣಿಸಬೇಕು. ಕರ್ನಾಟಕದ ಮಾವು ಬೆಳೆಗಾರರಿಗೆ ಪಿಡಿಪಿಎಸ್ ಯೋಜನೆಯಡಿ ಸೂಕ್ತ ಬೆಂಬಲ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ಮಾವು ಬೆಳೆಗಾರರು ಉತ್ತಮ ಬೆಲೆಗಾಗಿ ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಈ ಮನವಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.