ತಮಿಳುನಾಡು ರಾಜಕಾರಣದಲ್ಲಿ ಈಗ ಹೊಸ ಯುಗ ಆರಂಭವಾಗಿದೆ. ದಶಕಗಳ ಕಾಲ ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿದ್ದ ತಮಿಳುನಾಡಿನಲ್ಲಿ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಅಕ್ಷರಶಃ ಸುನಾಮಿ ಸೃಷ್ಟಿಸಿದೆ. ಪಕ್ಷ ಸ್ಥಾಪನೆಯಾದ ಕೇವಲ ಎರಡೇ ವರ್ಷಗಳಲ್ಲಿ ವಿಜಯ ಅವರ TVK ಪಕ್ಷವು 234 ಕ್ಷೇತ್ರಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಈ ಐತಿಹಾಸಿಕ ಜಯದ ನಡುವೆಯೂ ವಿಜಯ ಅವರಿಗೆ ಒಂದು ದೊಡ್ಡ ತಲೆನೋವು ಶುರುವಾಗಿದೆ. ಅದುವೇ ‘ಮ್ಯಾಜಿಕ್ ನಂಬರ್’. ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಪೈಕಿ ವಿಜಯ ಅವರ ಪಕ್ಷಕ್ಕೆ 10 ಸ್ಥಾನಗಳ ಕೊರತೆ ಎದುರಾಗಿದೆ.
ಸಂಖ್ಯಾಬಲದ ಲೆಕ್ಕಾಚಾರ:
ಚುನಾವಣಾ ಫಲಿತಾಂಶದ ಪ್ರಕಾರ, ವಿಜಯ ಅವರು ಸ್ಪರ್ಧಿಸಿದ್ದ ಪೆರಂಬೂರ್ ಮತ್ತು ತಿರುಚ್ಚಿ ಈಸ್ಟ್ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಇನ್ನು ಅಧಿಕಾರದಲ್ಲಿದ್ದ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು ಕೇವಲ 73 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದರಲ್ಲಿ ಡಿಎಂಕೆ 59 ಮತ್ತು ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದಿವೆ. ಇನ್ನೊಂದೆಡೆ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟವು 53 ಸ್ಥಾನಗಳನ್ನು ಪಡೆದಿದ್ದು, ಎಐಎಡಿಎಂಕೆ 47 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ.
ಕಾಂಗ್ರೆಸ್ ನೀಡಿದ ‘ಕಂಡೀಷನಲ್’ ಬೆಂಬಲ:
ತನ್ನದೇ ಆದ ಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಾಗದ ವಿಜಯ ಅವರಿಗೆ ಈಗ ಕಾಂಗ್ರೆಸ್ ಪಕ್ಷ ಆಸರೆಯಾಗಿ ನಿಂತಿದೆ. ಆದರೆ ಕಾಂಗ್ರೆಸ್ ಒಂದು ಶರತ್ತು ವಿಧಿಸಿದೆ. “ಸಂವಿಧಾನ ವಿರೋಧಿ ಮತ್ತು ಕೋಮು ಶಕ್ತಿಗಳನ್ನು” ಮೈತ್ರಿಯಿಂದ ಹೊರಗಿಟ್ಟರೆ ಮಾತ್ರ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ವಿಜಯ ಅವರು ಈಗಾಗಲೇ ಬಿಜೆಪಿಯನ್ನು “ವೈದ್ಧಾಂತಿಕ ವಿರೋಧಿ” ಎಂದು ಕರೆದಿರುವುದರಿಂದ ಈ ಮೈತ್ರಿ ಸುಲಭವಾಗಿ ಕಾಣುತ್ತಿದೆ. ಆದರೆ ಇಲ್ಲಿಯೂ ಒಂದು ಸಮಸ್ಯೆಯಿದೆ; ಟಿವಿಕೆ ಮತ್ತು ಕಾಂಗ್ರೆಸ್ ಸೇರಿದರೂ ಸಂಖ್ಯಾಬಲ 113 ಆಗಲಷ್ಟೇ ಅಷ್ಟೇ. ಅಂದರೆ ಬಹುಮತಕ್ಕೆ ಇನ್ನೂ 5 ಸ್ಥಾನಗಳ ಕೊರತೆ ಇದ್ದೇ ಇದೆ.
ರಾಜಭವನದಲ್ಲಿ ಹಗ್ಗಜಗ್ಗಾಟ:
ಈ ನಡುವೆ ವಿಜಯ ಅವರು ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಆದರೆ ರಾಜ್ಯಪಾಲರು ಮಾತ್ರ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದು, ವಿಜಯ ಅವರಿಗೆ ಕೂಡಲೇ ಆಹ್ವಾನ ನೀಡಿಲ್ಲ. ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸುವ ಬದಲು, ಶಾಸಕರ ಬೆಂಬಲ ಪತ್ರ ನೀಡುವಂತೆ ಕೇಳುತ್ತಿರುವುದು ತಮಿಳುನಾಡಿನಲ್ಲಿ ರಾಜಕೀಯ ಗೊಂದಲಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ನ ಹಳೆಯ ತೀರ್ಪುಗಳ ಪ್ರಕಾರ ಬಹುಮತವನ್ನು ವಿಧಾನಸಭೆಯಲ್ಲೇ ಸಾಬೀತುಪಡಿಸಬೇಕೆ ಹೊರತು ರಾಜ್ಯಪಾಲರ ಮುಂದೆ ಅಲ್ಲ ಎಂಬ ವಾದಗಳೂ ಕೇಳಿಬರುತ್ತಿವೆ.
ಎದುರಾಳಿಗಳ ನಡೆ ಏನು?
ವಿಜಯ ಅವರಿಗೆ ಬೆಂಬಲ ನೀಡಬಹುದು ಎಂದು ಭಾವಿಸಲಾಗಿದ್ದ ಎಐಎಡಿಎಂಕೆ ಈಗ ಸ್ಪಷ್ಟವಾಗಿ ತನ್ನ ನಿಲುವು ತಿಳಿಸಿದೆ. ಕೆಪಿ ಮುನುಸಾಮಿ ಅವರು ಮಾತನಾಡಿ, “ಯಾವುದೇ ಕಾರಣಕ್ಕೂ ಎಐಎಡಿಎಂಕೆ ಟಿವಿಕೆಗೆ ಬೆಂಬಲ ನೀಡುವುದಿಲ್ಲ” ಎಂದು ಎಡಪ್ಪಾಡಿ ಪಳನಿಸ್ವಾಮಿ ಅವರ ಸಂದೇಶವನ್ನು ರವಾನಿಸಿದ್ದಾರೆ. ಇತ್ತ ಡಿಎಂಕೆ ಮೈತ್ರಿಕೂಟದಲ್ಲಿದ್ದ ವಿಸಿ ಕೆ (VCK) ಮತ್ತು ಎಡಪಕ್ಷಗಳು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ವಿಸಿ ಕೆ ಪಕ್ಷದ ಎರಡು ಸ್ಥಾನಗಳು ವಿಜಯ ಅವರಿಗೆ ದೊರೆತರೂ ಅವರ ಸಂಖ್ಯೆ 115ಕ್ಕೆ ಏರಲಿದೆಯೇ ಹೊರತು 118 ಮುಟ್ಟುವುದಿಲ್ಲ.
ಮುಂದೇನು?
ತಮಿಳುನಾಡಿನ ಇತಿಹಾಸದಲ್ಲೇ ಮೊದಲ ಬಾರಿಗೆ ದ್ರಾವಿಡ ಪಕ್ಷಗಳ ಆಡಳಿತವನ್ನು ಹತ್ತಿಕ್ಕಿ ವಿಜಯ ದಾಖಲೆ ಬರೆದಿದ್ದಾರೆ. ಆದರೆ ಅಧಿಕಾರದ ಗದ್ದುಗೆ ಏರುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಈಗ ಸಾಬೀತಾಗಿದೆ. ಮುಂದಿನ ಕೆಲವು ದಿನಗಳು ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ದಳಪತಿ ವಿಜಯ ಉಳಿದ 5 ಸ್ಥಾನಗಳನ್ನು ಹೇಗೆ ಹೊಂದಿಸುತ್ತಾರೆ? ರಾಜ್ಯಪಾಲರ ನಿರ್ಧಾರ ಏನಾಗಿರಲಿದೆ? ಎಂಬ ಕುತೂಹಲ ಇಡೀ ದೇಶದ ಗಮನ ಸೆಳೆದಿದೆ.






















