Home Advertisement
Home ನಮ್ಮ ಜಿಲ್ಲೆ ಉಡುಪಿ ಶಸ್ತ್ರಾಸ್ತ್ರ ಹೋರಾಟದಿಂದ ಗೆಲುವು ಅಸಾಧ್ಯ

ಶಸ್ತ್ರಾಸ್ತ್ರ ಹೋರಾಟದಿಂದ ಗೆಲುವು ಅಸಾಧ್ಯ

0
134

ಉಡುಪಿ: ಶಸ್ತ್ರಾಸ್ತ್ರ ಹಿಡಿದು ಕಾಡುಮೇಡು ಅಲೆದು ಕೊನೆಗೆ ಪೋಲಿಸರ ಮುಂದೆ ಶರಣಾಗಿ, ಸಹಜ ಜೀವನ ನಡೆಸುತ್ತಿರುವ ನಕ್ಸಲ್ ತೊಂಬಟ್ಟು ಲಕ್ಷ್ಮಿಯ ಪತಿ, ಮಾಜಿ ನಕ್ಸಲ್ ಸಂಜೀವ್ ಯಾನೆ ಸಲೀಮ್, ಶಸ್ತ್ರಾಸ್ತ್ರ ಹಿಡಿದು ಹೋರಾಟ ಮಾಡಿದರೆ ಆಶಯ ಈಡೇರುವುದಿಲ್ಲ ಎಂದರು.
ಭಾನುವಾರ ಪತ್ರಕರ್ತರೊಂದಿಗೆ ತನ್ನ ಅನಿಸಿಕೆ ಹಂಚಿಕೊಂಡ ಅವರು, ನಾನು ಮೂಲತಃ ಪಾವಗಡ ತಾಲೂಕಿನವನು. 2004ರಿಂದ 2009ರ ತನಕ ನಕ್ಸಲ್ ಚಳುವಳಿಯಲ್ಲಿದ್ದು, ಆರು ತಿಂಗಳು ಮಾತ್ರ ಕರ್ನಾಟಕದಲ್ಲಿದ್ದೆ. ನನ್ನ ಮೇಲೆ ಯಾವುದೇ ಪ್ರಕರಣ ಈ ರಾಜ್ಯದಲ್ಲಿ ಇಲ್ಲ. ನಕ್ಸಲ್ ಆಗಿದ್ದರೆ ಯಾವ ಪ್ರಯೋಜನ ಇಲ್ಲ ಎಂದು ಅನ್ನಿಸಿ, ನಕ್ಸಲ್ ಆಗಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಅರಿವಾಯಿತು. ಹಾಗಾಗಿ 2009ರಲ್ಲಿ ರಾಜಶೇಖರ ರೆಡ್ಡಿ ಸಿಎಂ ಆಗಿದ್ದಾಗ ಮುಖ್ಯವಾಹಿನಿಗೆ ಮರಳಿದೆ ಎಂದರು.
ಪ್ರಸಕ್ತ ಕಾಲದಲ್ಲಿ ಚಳುವಳಿಗಳು ಸಾಧ್ಯವಿಲ್ಲ. ಚಳುವಳಿ ಮಾಡಿದರೂ ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲಕ ಮಾಡಬೇಕು ಎಂದರು.
ನಕ್ಸಲ್ ಚಳುವಳಿಯಲ್ಲಿರುವಾಗಲೇ 2008ರಲ್ಲಿ ಲಕ್ಷ್ಮಿಯನ್ನು ಮದುವೆಯಾದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶರಣಾಗತಿಗೆ ಕರೆಕೊಟ್ಟಿದ್ದಾರೆ ಎಂದು ಲಕ್ಷ್ಮಿಯ ಅಕ್ಕ, ಅಣ್ಣ ತಿಳಿಸಿದರು. ಶರಣಾಗುವಂತೆ ನಾನೂ ಸಲಹೆ ನೀಡಿದೆ. ಯಾವ ಒತ್ತಡ ಇಲ್ಲದೆ ಆಕೆ ಸ್ವತಃ ಬಂದು ಶರಣಾಗಿದ್ದಾಳೆ. ಆಕೆಯ ವಿರುದ್ಧದ 3 ಪ್ರಕರಣಗಳು ಕ್ಲೋಸ್ ಆಗಲಿದೆ ಎಂದು ಶರಣಾಗಿದ್ದಾಳೆ ಎಂದರು.
ನನ್ನ ವಿರುದ್ಧದ ಎಲ್ಲ ಪ್ರಕರಣ ಖುಲಾಸೆ ಆಗಿದ್ದು, ಪ್ರಸ್ತುತ ಆಂಧ್ರಪ್ರದೇಶದಲ್ಲಿ ಉದ್ಯಮ ನಡೆಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಂದು ನೆಲೆಸುತ್ತೇನೆ. ಲಕ್ಷ್ಮಿ ವಿರುದ್ಧದ ಪ್ರಕರಣಗಳು ಮುಗಿದ ನಂತರ ಕರ್ನಾಟಕದಲ್ಲೇ ವಾಸ ಮಾಡುತ್ತೇನೆ ಎಂದರು.