SK Home Ad
Home ಅಪರಾಧ ಬೈಕ್‌ಗೆ ಪೊಲೀಸ್ ಜೀಪ್ ಡಿಕ್ಕಿ: ವ್ಯಕ್ತಿ ಸಾವು

ಬೈಕ್‌ಗೆ ಪೊಲೀಸ್ ಜೀಪ್ ಡಿಕ್ಕಿ: ವ್ಯಕ್ತಿ ಸಾವು

0
117
ಅಮಾನತು

ಚಿಕ್ಕಮಗಳೂರು: ಜೀವ ರಕ್ಷಣೆ ಮಾಡಬೇಕಾದ ಪೊಲೀಸರೇ ಸ್ಕೂಟಿಯಲ್ಲಿದ್ದ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗಿರುವ ಘಟನೆ ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ನಡೆದಿದೆ.
ವೇಗವಾಗಿ ಬಂದ ಪೊಲೀಸ್ ಜೀಪ್ ಹಿಂಬದಿಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ತೆರಳಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೀವ ರಕ್ಷಣೆ ಮಾಡಬೇಕಾದ ಪೊಲೀಸರು ಮಾನವೀಯತೆ ಮರೆತು ವರ್ತಿಸಿರುವ ಘಟನೆ ನಡೆದಿದೆ. ಪೊಲೀಸ್ ಜೀಪ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸ್ಕೂಟರ್ ಸವಾರ ಗಂಗಾಧರ(೪೯) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಿಂಗಟಗೆರೆ ಪೊಲೀಸ್ ಠಾಣೆಗೆ ಸೇರಿದ ಜೀಪ್ ಇದಾಗಿದ್ದು, ಈ ಘಟನೆ ಕಡೂರು-ಮರವಂಜಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಮೃತದೇಹ ತೆಗೆಯಲು ಬಿಡುತ್ತಿಲ್ಲ. ಘಟನಾ ಸ್ಥಳದಲ್ಲಿ ನೂರಾರು ಸ್ಥಳೀಯರು ಜಮಾಯಿಸಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಪಘಾತವೆಸಗಿ ವಾಹನ ನಿಲ್ಲಿಸದೆ ಹೋದ ಜೀಪ್ ಚಾಲಕ ಶಿವಕುಮಾರ್‌ನನ್ನು ಎಸ್ಪಿ ಡಾ. ವಿಕ್ರಮ್ ಅಮಟೆ ಅಮಾನತು ಪಡಿಸಿದ್ದಾರೆ. ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಚಾಲಕನನ್ನು ಬಂಧಿಸಲಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.