SK Home Ad
Home ತಾಜಾ ಸುದ್ದಿ ʼಸರಿಗಮಪʼ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

ʼಸರಿಗಮಪʼ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

0
159

ಸರಿಗಮಪ ಸೀಸನ್ 17ರಲ್ಲಿ ಭಾಗಿಯಾಗಿದ್ದ ಅಂಧ ಗಾಯಕಿ

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪದಲ್ಲಿ ತನ್ನ ಮಧುರ ಕಂಠದ ಮೂಲಕ ವೀಕ್ಷಕರ ಮನ ಗೆದ್ದ ಮಂಜಮ್ಮ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.
ಸರಿಗಮಪ ಸೀಸನ್ 17ರಲ್ಲಿ ಭಾಗಿಯಾಗುವ ಮುನ್ನ ಅಂಧ ಗಾಯಕಿಯರಾದ ಮಂಜಮ್ಮ ಮತ್ತು ರತ್ನಮ್ಮ ದೇವಸ್ಥಾನದ ಮುಂದೆ ಹಾಡುತ್ತಿದ್ದರು. ಮಂಜಮ್ಮ ಮತ್ತು ರತ್ನಮ್ಮ ಕಂಠಕ್ಕೆ ಮನಸೋತ ಜೀ ಕನ್ನಡ ತಮ್ಮ ಸರಿಗಮಪ ವೇದಿಕೆಗೆ ಇವರನ್ನು ಕರೆತಂದಿತ್ತು. ಇನ್ನು ಮಂಜಮ್ಮ ಮತ್ತು ರತ್ನಮ್ಮ ಇಬ್ಬರು ಅಕ್ಕ-ತಂಗಿ ಹುಟ್ಟಿನಿಂದ ಕಣ್ಣಿಲ್ಲ. ಸಂಗೀತದ ಅಭ್ಯಾಸವನ್ನು ಕೂಡ ಇಬ್ಬರು ಯಾರ ಬಳಿ ಮಾಡಿಲ್ಲ. ಆದರೂ ಕೂಡ ತಮ್ಮ ಚಿನ್ನದ ಕಂಠದಿಂದ ಇಬ್ಬರು ಮೋಡಿ ಮಾಡಿದ್ದರು. ಸರಿಗಮಪ ಕಾರ್ಯಕ್ರಮದ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದರು. ಇತ್ತೀಚಿಗೆ ಮಂಜಮ್ಮಗೆ ಅನಾರೋಗ್ಯ ಹೆಚ್ಚಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಂಜಮ್ಮ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.