ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ಜೋಸೆಫ್ ವಿಜಯ್ ಚಂದ್ರಶೇಖರ್ (ದಳಪತಿ ವಿಜಯ್), ತಮ್ಮ ಚೊಚ್ಚಲ ಚುನಾವಣಾ ಕಣದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಐತಿಹಾಸಿಕ ಜಯಕ್ಕೆ ಭಾರತೀಯ ಚಿತ್ರರಂಗದ ಗಣ್ಯರಿಂದ ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿವೆ. ಕನ್ನಡದ ಸ್ಟಾರ್ ನಟ, ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ, ವಿಜಯ್ ಸಾಧನೆಯನ್ನು ಕೊಂಡಾಡಿದ್ದಾರೆ.
ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ದಳಪತಿ ವಿಜಯ್ಯವರಿಗೆ ವಿಶೇಷವಾಗಿ ಶುಭಕೋರಿದ್ದಾರೆ. “ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಕ್ಕಾಗಿ ವಿಜಯ್ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯವು ಹೆಚ್ಚಿನ ಪ್ರಗತಿ ಸಾಧಿಸಲಿ ಮತ್ತು ಬಲವಾದ ಸಾರ್ವಜನಿಕ ಸೇವೆಯನ್ನು ಜನತೆ ಪಡೆಯುವಂತಾಗಲಿ. ನಿಮ್ಮ ಈ ಸಾಧನೆಯು ರಾಜಕೀಯಕ್ಕೆ ಬರಬಯಸುವ ಅನೇಕ ಯುವಜನರಿಗೆ ಖಂಡಿತವಾಗಿಯೂ ದೊಡ್ಡ ಪ್ರೇರಣೆ ನೀಡಲಿದೆ,” ಎಂದು ರಿಷಬ್ ಪವರ್ಫುಲ್ ಮಾತುಗಳ ಮೂಲಕ ಈ ಯಶಸ್ಸನ್ನು ಬಣ್ಣಿಸಿದ್ದಾರೆ.

ಟಿವಿಕೆ ಪಕ್ಷದ ಐತಿಹಾಸಿಕ ಮುನ್ನಡೆ: ನಟ ವಿಜಯ್ ಫೆಬ್ರವರಿ 2, 2024 ರಂದು ‘ತಮಿಳಗ ವೆಟ್ರಿ ಕಳಗಮ್’ (TVK) ಎಂಬ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ತಮಿಳಿನಲ್ಲಿ ‘ವೆಟ್ರಿ’ ಎಂದರೆ ‘ಗೆಲುವು’ ಎಂದರ್ಥ. ತಮ್ಮ ಪಕ್ಷದ ಚಿಹ್ನೆಯಾದ ‘ಶಿಳ್ಳೆ’ (Whistle) ಮೂಲಕವೇ ಜನರ ಗಮನ ಸೆಳೆದಿದ್ದ ವಿಜಯ್, ಚುನಾವಣೆಯಲ್ಲಿ ಬರೋಬ್ಬರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ತಮಿಳು ರಾಜಕೀಯದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದಾರೆ.
ಸಿನಿಮಾ ರಂಗದಲ್ಲಿ ಶಿಳ್ಳೆ-ಚಪ್ಪಾಳೆಗಳ ಮೂಲಕ ರಂಜಿಸುತ್ತಿದ್ದ ವಿಜಯ್, ಈಗ ಅದೇ ‘ಶಿಳ್ಳೆ’ ಚಿಹ್ನೆಯೊಂದಿಗೆ ಶಾಸನಸಭೆ ಪ್ರವೇಶಿಸಿರುವುದು ವಿಶೇಷ. ದಕ್ಷಿಣ ಭಾರತದಾದ್ಯಂತ ವಿಜಯ್ ಈ ಗೆಲುವನ್ನು ಸಂಭ್ರಮಿಸಲಾಗುತ್ತಿದ್ದು, ನಟ ರಿಷಬ್ ಶೆಟ್ಟಿ ಈ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಜಯ್ ಗಟ್ಟಿ ನಾಯಕತ್ವವು ತಮಿಳುನಾಡಿನಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಸದ್ಯ ಮನೆಮಾಡಿರು ಸಂತಸದ ಸಂಗತಿ.























