SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಸಮುದ್ರದ ಉಸಿರಾಟ: ಎಲ್ನಿನೊ ಮತ್ತು ಲಾನಿನಾ ರಹಸ್ಯ; ಸಂಪೂರ್ಣ ಮಾಹಿತಿ

ಸಮುದ್ರದ ಉಸಿರಾಟ: ಎಲ್ನಿನೊ ಮತ್ತು ಲಾನಿನಾ ರಹಸ್ಯ; ಸಂಪೂರ್ಣ ಮಾಹಿತಿ

0
34

ಬೆಂಗಳೂರು: ಒಂದೇರಾಜ್ಯ. ಆದರೆ ಒಂದೆಡೆ ವರ್ಷಕ್ಕೆ 4ಸಾವಿರ ಮಿಲಿಮೀಟರ್‌ ಮಳೆ — ಇನ್ನೊಂದೆಡೆ ಕೇವಲ 400! ಒಂದೇ ಮೋಡ ಎರಡು ಊರಿಗೆ ಒಂದೇ ರೀತಿ ಮಳೆ ಕೊಡುವುದಿಲ್ಲಎಂದರೆನೀವುನಂಬುತ್ತೀರಾ? ಕರ್ನಾಟಕದ ಭೂಪಟ ಹರಡಿನೋಡಿ — ಪಶ್ಚಿಮ ಕರಾವಳಿಯಿಂದ ಉತ್ತರಒಳನಾಡಿನವರೆಗೆ ಕೇವಲ 200 ಕಿಲೋಮೀಟ ರ್ಅಂತರದಲ್ಲಿ ಮಳೆ ಹತ್ತುಪಟ್ಟು ಕಡಿಮೆ ಆಗುತ್ತದೆ. ಇದರ ಹಿಂದೆ ಅಡಗಿರುವ ವಿಜ್ಞಾನ ನಿಜಕ್ಕೂ ಬೆರಗುಮೂಡಿಸುವಂಥದ್ದು.

■ಗಾಳಿ ಮತ್ತು ಬೆಟ್ಟದ ನಡುವಿನ ಮಹಾಸಂಘರ್ಷ

ಜೂನ್‌ ತಿಂಗಳಲ್ಲಿ ನೈರುತ್ಯ ಮಾನ್ಸೂನ್‌ಗಳಿ ಅರಬ್ಬಿ ಸಮುದ್ರದ ಮೇಲಿಂದ ತೇವಾಂಶ ತುಂಬಿಕೊಂಡುಬರುತ್ತದೆ. ಅದರ ಒಡಲಲ್ಲಿ ಸಾವಿರಾರು ತನ್ನೀರಿನ ಆವಿ. ಅದು ಕರ್ನಾಟಕ ತಲುಪಿ ದಕ್ಷಣ ಮುಂದೆ ದೊಡ್ಡ ಗೋಡೆಯೊಂದು ಕಾಣಿಸುತ್ತದೆ — ಅದೇ ಪಶ್ಚಿಮಘಟ್ಟ. ಸಮುದ್ರ ಮಟ್ಟದಿಂದ 1500 ರಿಂದ 1800 ಮೀಟರ್ ಎತ್ತರ ನಿಂತಿರುವ ಈ ಪರ್ವತ ಶ್ರೇಣಿ ಮಳೆಗಾಳಿಗೆ ದಾರಿ ಬಿಡುವ ಬದಲು ಅದನ್ನುಮೇಲಕ್ಕೆ ದೂಡುತ್ತದೆ.

ಇಲ್ಲಿ ವಿಜ್ಞಾನ ಕಣ್ಣು ಬಿಡುತ್ತದೆ. ಗಾಳಿ ಎತ್ತರಕ್ಕೆ ಏರಿದಂತೆ ಒತ್ತಡ ಕಡಿಮೆ ಆಗುತ್ತದೆ, ಅದು ವಿಸ್ತರಿಸಿ ತಣ್ಣಗಾಗುತ್ತದೆ. ತಂಪುಗಾಳಿ ಒಳಗಿದ್ದತೇವಾಂಶವನ್ನು ಇನ್ನುಹಿಡಿದಿಟ್ಟುಕೊಳ್ಳಲಾಗದೆ ಮೋಡವಾಗಿ, ಮಳೆಯಾಗಿ ಸುರಿಸಿಬಿಡುತ್ತದೆ. ಈ ಪ್ರಕ್ರಿಯೆಗೆ ವಿಜ್ಞಾನದಲ್ಲಿ ‘ಭೂರೂಪಮಳೆ’ ಅಥವಾ Orographic Rainfall ಎನ್ನುತ್ತಾರೆ. ಅಂದರೆ ಬೆಟ್ಟ ಗಾಳಿಯನ್ನು ಮೇಲೆತಳ್ಳಿ, ಮಳೆ ಹಿಂಡಿತೆಗೆಯುವ ಒಂದು ಅದ್ಭುತಯಂತ್ರ!

ಇದರ ಫಲವಾಗಿ ಮಂಗಳೂರು, ಉಡುಪಿ, ಕಾರವಾರ, ಶಿರಸಿ ಮತ್ತು ಕೊಡಗಿನ ಭಾಗಗಳಲ್ಲಿ ವರ್ಷಕ್ಕೆ ೩,೦೦೦ ರಿಂದ ೪,೦೦೦ ಮಿ.ಮೀ. ಮಳೆ ಸುರಿಯುತ್ತದೆ. ಅಗುಂಬೆ ಗ್ರಾಮದಲ್ಲಿ ಕೆಲವು ವರ್ಷ ೭,೦೦೦ ಮಿ.ಮೀ.ಗೂ ಹೆಚ್ಚು ದಾಖಲಾಗಿದೆ — ಅದಕ್ಕೇಅದನ್ನು ‘ದಕ್ಷಿಣ ಭಾರತದ ಚಿರಪುಂಜಿ’  ಎನ್ನುತ್ತಾರೆ.

ಒಣ ನೆರಳಿನ ಊರುಗಳು: ಬೆಟ್ಟದ ಮರೆಮಳೆ ಕದ್ದ ಕಥೆ

ಆದರೆ ಆ ಗಾಳಿ ಪರ್ವತ ಶಿಖರ ದಾಟಿ ಪೂರ್ವ ಇಳಿಜಾರಿಗೆ ಬಂದಾಗ ಇನ್ನೊಂದು ವಿಚಿತ್ರ ಸಂಭವಿಸುತ್ತದೆ. ಮಳೆ ನೀಡಿ ಖಾಲಿಯಾದ ಗಾಳಿ ಈಗ ಕೆಳಕ್ಕೆ ಇಳಿಯಲು ಶುರುವಾಗುತ್ತದೆ. ಕೆಳಗಿಳಿದಂತೆ ಅದು ಸಂಕುಚಿತಗೊಳ್ಳುತ್ತದೆ — ಮತ್ತೆ ಬಿಸಿಆಗುತ್ತದೆ, ಒಣಆಗುತ್ತದೆ. ಆಲ್ಪ್ಸ್ಪರ್ವತದಲ್ಲಿ ಮೊದಲು ಗುರುತಿಸಲಾದ ಈ ವಿದ್ಯಮಾನಕ್ಕೆ ‘ಫೇನ್ಪರಿಣಾಮ’ (Foehn Effect) ಎಂಬಹೆಸರಿದೆ.

ಈ ಒಣ, ಬೆಚ್ಚನೆಯ ಗಾಳಿ ಡೆಕ್ಕನ್ಪ್ರಸ್ಥಭೂಮಿ ತಲುಪುವ ಹೊತ್ತಿಗೆ ಮಳೆ ನೀಡುವ ಸಾಮರ್ಥ್ಯ ಬಹುತೇಕ ಖಾಲಿ ಆಗಿರುತ್ತದೆ. ಇದನ್ನೇ ‘ಮಳೆ-ನೆರಳಿನ ಪ್ರದೇಶ’ (Rain Shadow Zone) ಎನ್ನುತ್ತಾರೆ — ಅಂದರೆ ಬೆಟ್ಟದ ನೆರಳು ಮಳೆಯನ್ನೇ ತಡೆದ ಜಾಗ.

ತುಮಕೂರು, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳು ಈ ನೆರಳಿನಲ್ಲಿ ಬೀಳುತ್ತವೆ. ಇಲ್ಲಿ ವಾರ್ಷಿಕ ಮಳೆ ೪೦೦ ರಿಂದ ೬೦೦ ಮಿ.ಮೀ. ಮಾತ್ರ. ಕರಾವಳಿ ಉಡುಪಿ ಮತ್ತು ಒಳನಾಡಿನ ರಾಯಚೂರು ಎರಡೂ ಒಂದೇ ರಾಜ್ಯದ ಭಾಗ — ಆದರೆ ರಾಯಚೂರಿನಲ್ಲಿ ಉಡುಪಿಯ ಏಳನೇ ಒಂದು ಭಾಗಮಳೆ ಬೀಳುತ್ತದೆ. ಇದು ಪ್ರಕೃತಿ ಮಾಡುವ ಅಸಮಾನ ಹಂಚಿಕೆ!

ಬಂಗಾಳ ಕೊಲ್ಲಿಯ ಮಳೆರಾಯ ಭಾರಿ: ಕಡಿಮೆ ಒತ್ತಡ ವ್ಯವಸ್ಥೆ

ಆದರೆ ಪ್ರಕೃತಿ ತನ್ನಲೆಕ್ಕದಲ್ಲಿ ಒಂದು ಸರಿ ಮಾಡಿಕೊಂಡಿದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಬಂಗಾಳಕೊಲ್ಲಿಯ ಬೆಚ್ಚನೆಯ ನೀರಿನ ಮೇಲೆ ಒಂದು ಅದ್ಭುತ ವಿದ್ಯಮಾನ ನಡೆಯುತ್ತದೆ. ಸಮುದ್ರ ನೀರು ಆವಿಯಾಗಿ ಮೇಲೆ ಏರುತ್ತದೆ, ಒಂದು ಜಾಗದಲ್ಲಿ ಗಾಳಿಯ ಒತ್ತಡ ಥಟ್ಟನೆ ಕಡಿಮೆ ಆಗಿ ‘ಒತ್ತಡಗುಳಿ’ ಸೃಷ್ಟಿಯಾಗುತ್ತದೆ. ಸುತ್ತಲಿನ ಗಾಳಿ ಈ ಗಾಳಿ ತುಂಬಲು ಒಳಗೆನುಗ್ಗುತ್ತದೆ — ಮೋಡ, ತೇವಾಂಶ ಮತ್ತು ಗಾಳಿ ಒಟ್ಟಾಗಿ ಒಂದು ಬೃಹತ್‌ ಮಳೆ ಯಂತ್ರಸಿದ್ಧಗೊಳ್ಳುತ್ತದೆ.

ಈ ಕಡಿಮೆ ಒತ್ತಡ ವ್ಯವಸ್ಥೆ (Low Pressure System / Depression) ಪಶ್ಚಿಮ ದಿಕ್ಕಿಗೆ ಚಲಿಸುತ್ತ ಒಡಿಶಾ, ಆಂಧ್ರ, ತೆಲಂಗಾಣ ಮೂಲಕ ದಕ್ಷಿಣ ಭಾರತದ ಒಳನಾಡಿಗೆ ಪ್ರವೇಶಿಸುತ್ತದೆ. ಇದು ದಾರಿಯಲ್ಲಿ ಭಾರಿಮಳೆ ಸುರಿಸುತ್ತ ಸಾಗುತ್ತದೆ. ಕೆಲವೊಮ್ಮೆ ಈ ವ್ಯವಸ್ಥೆ ಮತ್ತಷ್ಟು ಶಕ್ತಿಗಳಿಸಿ Depression  Deep Depression ಆಗಿ ಅತಿ ಭಾರಿ ಮಳೆ ತರುತ್ತದೆ.

ಕೆಲವು ವಿಶೇಷ ಸಂದರ್ಭಗಳಲ್ಲಿ ಈ ವ್ಯವಸ್ಥೆ ಮುಂಬೈ ಅಥವಾ ಕೊಂಕಣ ಕರಾವಳಿ ದಾಟಿ ಅರಬ್ಬಿ ಸಮುದ್ರ ತಲುಪುತ್ತದೆ. ಆಗ ಅಲ್ಲಿಸ್ಥಿರ ವಾಗಿನಿಂತಿರುವ ಮಾನ್ಸೂನ್‌ ಗಾಳಿ ಒಮ್ಮೆಲೆ ಉತ್ಸಾಹ ಪಡೆದಂತೆ ತೀವ್ರಗೊಳ್ಳುತ್ತದೆ. ಈ ಎರಡೂ ವ್ಯವಸ್ಥೆಗಳ ಸಂಯೋಗ ಕರ್ನಾಟಕದ ಒಣಜಿಲ್ಲೆಗಳಿಗೆ ಅಮೃತದಂತಹ ಮಳೆ ನೀಡುತ್ತದೆ.

ಒಣ ಜಿಲ್ಲೆಗಳಿಗೆ ಬಂಗಾಳಕೊಲ್ಲಿ ಕರುಣೆ ತೋರುವ ಬಗೆ

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಭೌಗೋಳಿಕ ದೃಷ್ಟಿಯಿಂದ ಮಳೆ-ನೆರಳಿನ ಪ್ರದೇಶ. ಇಲ್ಲಿ ಮಾನ್ಸೂನ್‌ ತಡವಾಗಿ ಬರುತ್ತದೆ, ಮೊದಲೇ ಹೊರಟು ಹೋಗುತ್ತದೆ ಮತ್ತು ಮಧ್ಯದಲ್ಲಿ ದೀರ್ಘವಿರಾಮ ತೆಗೆದುಕೊಳ್ಳುತ್ತದೆ. ಇಲ್ಲಿನ ರೈತರಿಗೆ ಮಳೆ ಎಂದರೆದೇ ವರ ಅನುಗ್ರಹ.

ಆದರೆ ಬಂಗಾಳಕೊಲ್ಲಿ ಕಡಿಮೆ ಒತ್ತಡ ವ್ಯವಸ್ಥೆ ಬಂದಾಗ ದೃಶ್ಯ ಸಂಪೂರ್ಣ ಬದಲಾಗುತ್ತದೆ. ಒಂದೆರಡು ದಿನ ಬಿಡದೆ ಮಳೆ. ಕೆಲವೊಮ್ಮೆ ಒಂದೇ ವಾರದಲ್ಲಿ ತಿಂಗಳ ಸರಾಸರಿ ಮಳೆ ಬಿದ್ದು ಹೋಗುತ್ತದೆ. ಕೃಷ್ಣಾ, ಭೀಮಾ ನದಿಗಳಲ್ಲಿ ಒಮ್ಮೆಲೆ ಪ್ರವಾಹ. ಒಣ ನೆಲ ರಾತ್ರಿ ಬೆಳಗಾಗುವಷ್ಟರಲ್ಲಿ ತೊಯ್ದು ಹೋಗಿರುತ್ತದೆ.

ಮೈಸೂರು ಮತ್ತು ಬೆಂಗಳೂರಿಗೂ. ಅಕ್ಟೋಬರ್-ನವೆಂಬರ್‌ ತಿಂಗಳಲ್ಲಿ ‘ಈಶಾನ್ಯ ಮಾನ್ಸೂನ್’ ಸಮಯದಲ್ಲಿ ಬಂಗಾಳಕೊಲ್ಲಿ ವ್ಯವಸ್ಥೆ ಬಂದಾಗ ಬೆಂಗಳೂರಿನ ರಸ್ತೆಗಳು ನದಿ ಆಗುತ್ತವೆ. ಬೆಂಗಳೂರಿನ ವಾರ್ಷಿಕ ಮಳೆಯ ಸುಮಾರು ಮೂರನೇ ಒಂದರಷ್ಟು ಈ ಒಂದೆರಡು ತಿಂಗಳಲ್ಲೇ ಬೀಳುತ್ತದೆ.

ಮೂರು ಭಾಗ, ಮೂರು ಜೀವನ, ಮೂರು ಮಳೆ

ಕರ್ನಾಟಕವನ್ನು ಮಳೆ ದೃಷ್ಟಿಕೋನದಿಂದ ಮೂರು ವಿಶಿಷ್ಟ ಭಾಗಗಳಾಗಿ ಕಾಣಬಹುದು. ಮೊದಲನೆಯದು — ಕರಾವಳಿ ಮತ್ತು ಮಲೆನಾಡು: ಮಾನ್ಸೂನ್‌ ಮತ್ತು ಭೂರೂಪ ಮಳೆ ಒಟ್ಟಾಗಿ ೨,೦೦೦ ರಿಂದ ೪,೦೦೦ ಮಿ.ಮೀ. ಸುರಿಯುತ್ತವೆ. ದಟ್ಟ ಅರಣ್ಯ, ಕಾಫಿ-ಏಲಕ್ಕಿ ತೋಟ, ಸದಾ ಹಸಿರು ಭೂಮಿ.

ಎರಡನೆಯದು — ಮಧ್ಯ ಕರ್ನಾಟಕ: ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಚಿಕ್ಕಮಗಳೂರು. ಇಲ್ಲಿ ನೈರುತ್ಯ ಮತ್ತು ಈಶಾನ್ಯ ಮಾನ್ಸೂನ್ ಎರಡೂ ಮಳೆ ಕೊಡುತ್ತವೆ. 700 ರಿಂದ 1200 ಮಿ.ಮೀ. ಮಳೆ. ತೋಟ-ಗದ್ದೆ ಸಮತೋಲನ.

ಮೂರನೆಯದು — ಒಳನಾಡಿನ ಒಣಭಾಗ: ಉತ್ತರ ಕರ್ನಾಟಕ ಮತ್ತು ಕಲ್ಯಾಣಕರ್ನಾಟಕ. ಇಲ್ಲಿ 400 ರಿಂದ 600 ಮಿ.ಮೀ. ಮಾತ್ರ. ಮಳೆ ಬಿದ್ದಾಗ ಸಂಭ್ರಮ, ಬಾರದಿದ್ದಾಗ ಬರ. ಇಲ್ಲಿನ ಜನ ಆಕಾಶ ನೋಡಿ ಬೇಸಾಯ ಮಾಡುತ್ತಾರೆ — ಅಕ್ಷರಶಃ!

ವಿಜ್ಞಾನ ಎಚ್ಚರಿಸುತ್ತದೆ, ಮಾನ್ಸೂನ್‌ ಕಲಿಸುತ್ತದೆ ಈ ಮಳೆ ವ್ಯತ್ಯಾಸ ಬರೀ ಭೌಗೋಳಿಕ ಕಾರಣಕ್ಕೆ ಮಾತ್ರ ನಿಂತಿಲ್ಲ. ಹಿಂದೂಮಹಾಸಾಗರ ದ್ವಿಧ್ರುವ (IOD), ಎಲ್ನಿನೋ ಮತ್ತು ಲಾನಿನಾ ಮುಂತಾದ ಜಾಗತಿಕ ಹವಾಮಾನ ವ್ಯವಸ್ಥೆಗಳು ಕರ್ನಾಟಕದ ಮಳೆ ಹೆಚ್ಚು-ಕಡಿಮೆ ಮಾಡಬಲ್ಲವು. ಎಲ್ನಿನೋ ಬಂದ ವರ್ಷ ಇಡೀ ದೇಶದಲ್ಲಿ ಮಳೆ ಕಡಿಮೆ, ಲಾನಿನಾ ಬಂದ ವರ್ಷ ಅಧಿಕ ಮಳೆ.

ಪ್ರಕೃತಿ ಎಲ್ಲರಿಗೂ ಸಮಾನ ಮಳೆ ಕೊಡುವುದಿಲ್ಲ — ಇದು ವಾಸ್ತವ. ಆದರೆ ಆ ಅಸಮಾನತೆಯ ಹಿಂದೆ ಒಂದು ಅದ್ಭುತ ವ್ಯವಸ್ಥೆ ಕೆಲಸ ಮಾಡುತ್ತಿದೆ. ಪಶ್ಚಿಮ ಘಟ್ಟ ಮಳೆ ಹಿಡಿದಿಟ್ಟು ಕೊಂಡರೆ, ಬಂಗಾಳ ಕೊಲ್ಲಿ ಒಣ ನೆಲಕ್ಕೆ ಮಳೆ ಕಳಿಸುತ್ತದೆ. ಮಾನ್ಸೂನ್‌ ತಡಮಾಡಿದರೆ, ಕಡಿಮೆ ಒತ್ತಡ ವ್ಯವಸ್ಥೆ ಸಹಾಯಕ್ಕೆ ಧಾವಿಸುತ್ತದೆ. ಇದು ಪ್ರಕೃತಿ ರೂಪಿಸಿದ ಮಳೆ-ಸಮತೋಲನ. ಈ ವ್ಯವಸ್ಥೆ ಅರ್ಥಮಾಡಿಕೊಂಡಾಗಲೇ ಕರ್ನಾಟಕದ ಮಣ್ಣು, ಮಳೆ, ಮನುಷ್ಯ — ಮೂರೂ ಒಂದಾಗಿ ಕಾಣಿಸುತ್ತಾರೆ.

 ಕರ್ನಾಟಕ ಈ ಬಾರಿ ಒಟ್ಟಾರೆ ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗುವ ಸಾಧ್ಯತೆ ಇದೆ. ಜೂನ್ ತಿಂಗಳ ಆರಂಭದಲ್ಲಿ ಮುಂಗಾರು ಸಕಾಲದಲ್ಲಿ ಆಗಮಿಸಿ, ಪಶ್ಚಿಮ ಘಟ್ಟಗಳನ್ನು ಹಸಿರಿನಿಂದ ತುಂಬಿದ್ದರೂ, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಮಳೆಯ ತೀವ್ರತೆ  ಕಡಿಮೆಯಾಗಬಹುದು.

ಕರಾವಳಿ ಕರ್ನಾಟಕ (ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ) ಸಾಮಾನ್ಯವಾಗಿ 3000 ಮಿ.ಮೀ.ಗಿಂತ ಹೆಚ್ಚು ಮಳೆ ಪಡೆಯುತ್ತದೆ. ಆದರೆ ಈ ಬಾರಿ ಈ ಪ್ರದೇಶದಲ್ಲೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡು. ದಕ್ಷಿಣ ಒಳನಾಡು ಕರ್ನಾಟಕದಲ್ಲೂ  ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಮುನ್ಸೂಚನೆ ಇದೆ.

ಈ ದುರ್ಬಲ ಮುಂಗಾರಿಗೆ ಮುಖ್ಯ ಕಾರಣ Pacific Ocean ನಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ. ವರ್ಷದ ಆರಂಭದಲ್ಲಿ ದುರ್ಬಲ La Niña ಪರಿಸ್ಥಿತಿ ಇದ್ದು, ಈಗ ENSO-neutral ಹಂತದ ಮೂಲಕ El Niño ಪರಿಸ್ಥಿತಿಯತ್ತ ಬದಲಾಗುತ್ತಿದೆ. ಐತಿಹಾಸಿಕವಾಗಿ El Niño ಭಾರತದ ಮುಂಗಾರು ಮಳೆಯನ್ನು ತಡೆಹಿಡಿಯುತ್ತದೆ.

ರೈತರಿಗೆ ಮಣ್ಣಿನ ತೇವಾಂಶ ಕಡ್ಡಾಯ ಗಮನದಲ್ಲಿಟ್ಟುಕೊಳ್ಳಿ ಎಂದು ಕೃಷಿ ಇಲಾಖೆ ಸಲಹೆ ನೀಡಿದೆ. ಕೊಡಗು, ಚಿಕ್ಕಮಗಳೂರು, ಸಕಲೇಶಪುರದಂತಹ ಪ್ರದೇಶಗಳಿಗೆ ಪ್ರವಾಸ ಯೋಜಿಸುವವರು  ಎಚ್ಚರಿಕೆ ಗಮನಿಸಿ ಪ್ರಯಾಣಿಸಬೇಕು.

ಲೇಖಕರು: ಚನಬಸನಗೌಡ. ಎಸ್. ಪಾಟೀಲ್, ಹಿರಿಯವಿಜ್ಞಾನಿಗಳು,

ಭಾರತೀಯ ಹವಾಮಾನ ಇಲಾಖೆ (IMD),