ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ ಸುದ್ದಿ ಮಾಧ್ಯಮಗಳಲ್ಲಿ ಮುನ್ನಲೆಗೆ ಬಂದಿರುವುದನ್ನು ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮೋದಿಯವರು ಹೇಳುವುದಕ್ಕೂ ಮುಂಚೆಯೇ ವಾರದಲ್ಲಿ ಒಂದು ದಿನ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದೆವು. ಮಾಧ್ಯಮಗಳು ವಿಜಯೇಂದ್ರ ಮೆಟ್ರೋ ಹತ್ತಿದ್ದನ್ನೇ ಪದೇ ಪದೇ ತೋರಿಸುತ್ತಿವೆ, ಆದರೆ ದೇಶವನ್ನು ಈ ಸ್ಥಿತಿಗೆ ತಂದವರು ಯಾರು ಎಂದು ಬಿಜೆಪಿಯವರನ್ನು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ದೇಶದಲ್ಲಿ ನಡೆದಿರುವ ನೀಟ್ ಪರೀಕ್ಷಾ ಅಕ್ರಮದ ಕುರಿತು ಪ್ರಧಾನಿ ಮೋದಿ ಯಾಕೆ ಮೌನವಾಗಿದ್ದಾರೆ? ಇದರಿಂದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಇದಕ್ಕೆ ಕಾರಣರಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಇನ್ನು ಯಾಕೆ ಸಚಿವ ಸ್ಥಾನದಲ್ಲಿ ಮುಂದುವರಿಸಲಾಗಿದೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ವಿದೇಶದಿಂದ (ಚೀತಾಗಳನ್ನು) ತಂದ ಪ್ರಾಣಿಗಳು ಸತ್ತು ಹೋದವು. ಆದರೆ ನಾವು ಈಗ ನಮ್ಮ ಮೃಗಾಲಯಕ್ಕೆ ತರುವ ಪ್ರಾಣಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿ, ಸಂರಕ್ಷಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ದೇಶವು ಆರ್ಥಿಕ ಸಂಕಷ್ಟದತ್ತ ಸಾಗುತ್ತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮೊದಲೇ ಹೇಳಿದ್ದರು. ಆದರೆ ಆಗ ಯಾರೂ ಆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗ ಮಧ್ಯಪ್ರಾಚ್ಯದ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಸಾರ್ವಜನಿಕರಿಗೆ ಪೆಟ್ರೋಲ್ ಕಡಿಮೆ ಬಳಸಿ ಎಂದು ಬುದ್ಧಿವಾದ ಹೇಳುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.






















