ನವದೆಹಲಿ : ದೆಹಲಿ ಮಹಾನಗರ ಪಾಲಿಕೆ (MCD) ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರವೇಶ್ ವಾಹಿ ಅವರು ದೆಹಲಿಯ ನೂತನ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಕ್ಷ (BJP) ಹಿರಿಯ ನಾಯಕನಾದ ವಾಹಿ ಅವರ ಆಯ್ಕೆಯನ್ನು ಪಾಲಿಕೆಯ ಅಧ್ಯಕ್ಷ ರಾಜಾ ಇಕ್ಬಾಲ್ ಸಿಂಗ್ ಅಧಿಕೃತವಾಗಿ ಘೋಷಿಸಿದರು.
ಆಮ್ ಆದ್ಮಿ ಪಾರ್ಟಿ (AAP) ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯ ಗೆಲುವು ಸುಲಭವಾಗಿದ್ದು, ಪಾಲಿಕೆಯಲ್ಲಿ ಬಿಜೆಪಿಯ ಬಲ ಮತ್ತಷ್ಟು ಗಟ್ಟಿಯಾಗಿದೆ.
ಅವಿರೋಧ ಆಯ್ಕೆ – ಬಿಜೆಪಿಗೆ ಸ್ಪಷ್ಟ ಬಹುಮತ : ದೆಹಲಿ ಪಾಲಿಕೆಯ ಒಟ್ಟು 273 ಮತಗಳಲ್ಲಿ ಗೆಲುವಿಗೆ 137 ಮತಗಳು ಸಾಕಾಗುತ್ತವೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಸುಮಾರು 156 ಸದಸ್ಯರ ಬೆಂಬಲ ದೊರಕಿದ್ದು, ಸ್ಪಷ್ಟ ಬಹುಮತ ಹೊಂದಿತ್ತು. ಕಾಂಗ್ರೆಸ್ ಕೇವಲ 9 ಮತಗಳಿಗೆ ಸೀಮಿತವಾಗಿದ್ದು, AAP ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಬಿಜೆಪಿಗೆ ಅನುಕೂಲಕರವಾಯಿತು.
ಮೇಯರ್ ವಾಹಿ ಪ್ರತಿಕ್ರಿಯೆ : ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಪ್ರವೇಶ್ ವಾಹಿ, “ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಪಕ್ಷದ ನಾಯಕತ್ವಕ್ಕೆ ನಾನು ಚಿರಋಣಿ. ದೆಹಲಿ ಜನರ ಸೇವೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಭಾವುಕರಾಗಿ ತಿಳಿಸಿದ್ದಾರೆ.
ರಾಜಕೀಯ ಪಯಣ : ಪ್ರವೇಶ್ ವಾಹಿ ಅವರ ರಾಜಕೀಯ ಪಯಣ ಗಮನಾರ್ಹವಾಗಿದೆ. ಇವರ ಕುಟುಂಬ ಮೂಲತಃ ಪಾಕಿಸ್ತಾನದ ರಾವಲ್ಪಿಂಡಿಯಿಂದ ಭಾರತಕ್ಕೆ ವಲಸೆ ಬಂದು ದೆಹಲಿಯಲ್ಲಿ ನೆಲೆಸಿತ್ತು. ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಿದ್ಧಾಂತಗಳಿಂದ ಪ್ರಭಾವಿತರಾದ ಅವರು, 1990ರಲ್ಲಿ ವಿಶ್ವ ಹಿಂದೂ ಪರಿಷತ್ ಮೂಲಕ ತಮ್ಮ ಸಾಮಾಜಿಕ ಕಾರ್ಯವನ್ನು ಆರಂಭಿಸಿದರು. ನಂತರ ಬಿಜೆಪಿ ಯುವ ಮೋರ್ಚಾ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.
2007ರಲ್ಲಿ ರೋಹಿಣಿಯಿಂದ ಮೊದಲ ಬಾರಿಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದು, ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ದೆಹಲಿ ಮೇಯರ್ ಹುದ್ದೆ ಸವಾಲಿನ ಹೊಣೆಗಾರಿಕೆಯಾಗಿದ್ದು, ಕಸದ ವಿಲೇವಾರಿ, ಮಾಲಿನ್ಯ ನಿಯಂತ್ರಣ, ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಣೆ, ಇವು ಪ್ರಮುಖ ಸವಾಲುಗಳಾಗಿವೆ. ರಾಜಧಾನಿಯಲ್ಲಿ ನಾಗರಿಕ ಸೇವೆಗಳನ್ನು ಸುಧಾರಿಸುವತ್ತ ಹೊಸ ಮೇಯರ್ ಗಮನಹರಿಸುವ ನಿರೀಕ್ಷೆಯಿದೆ.



















