ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇಂದು ಬೆಳಿಗ್ಗೆ 7 ಗಂಟೆಯಿಂದ ಶಾಂತಿಯುತವಾಗಿ ಆರಂಭಗೊಂಡಿದ್ದು, ಮತದಾರರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆರಂಭಿಕ ಗಂಟೆಗಳಲ್ಲಿ ನಿಧಾನಗತಿಯಲ್ಲಿದ್ದ ಮತದಾನ, ನಂತರ ಕ್ರಮೇಣ ವೇಗ ಪಡೆದುಕೊಂಡು ಶಾಂತಿಯುತ ಮತದಾನ ನಡೆಯುತ್ತಿದೆ. ದಿನದ ಬೆಳವಣಿಗೆಗಳ LIVE ಅಪ್ಡೇಟ್ ಇಲ್ಲಿದೆ…
9 ಗಂಟೆ ವೇಳೆ 11.87 ಶೇ. ಮತದಾನ

ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮತದಾನ
ಬಾಗಲಕೋಟೆ ಉಪ ಚುನಾವಣೆ ವಿಧಾನದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮತದಾನಕ್ಕೂ ಮುನ್ನ ತಂದೆ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಸ್ವಗ್ರಾಮ ತಿಮ್ಮಾಪುರದಲ್ಲಿ ಮತ ಚಲಾಯಿಸಿದರು.
ಕಾಂಗ್ರೆಸ್ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ : ವೀರಣ್ಣ ಚರಂತಿಮಠ ಆರೋಪ

ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಜನರಲ್ಲಿ ಉತ್ತಮ ಉತ್ಸಾಹ ಕಂಡುಬರುತ್ತಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಕುಟುಂಬ ಸಮೇತರಾಗಿ ಮತದಾನ ಮಾಡಿ ಗಮನ ಸೆಳೆದರು. ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ಕುರಿತು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ಅಲ್ಪ ಅಂತರದಲ್ಲಿ ಸೋಲುಂಡಿದ್ದನ್ನು ನೆನಪಿಸಿಕೊಂಡ ಅವರು, ಈ ಬಾರಿ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಜನರ ಬೆಂಬಲ ತಮ್ಮ ಪರ ಇದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ಕ್ಷೇತ್ರದಲ್ಲಿ ಹಣ ಹಂಚಿಕೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿದರು. ಲಕ್ಷಾಂತರದಿಂದ ಕೋಟ್ಯಂತರ ರೂಪಾಯಿ ವಿತರಣೆ ನಡೆದಿರುವ ಶಂಕೆ ಇದೆ ಎಂದು ಅವರು ಹೇಳಿದರು. ಅಲ್ಲದೆ, ಗೋಕಾಕ ಹಾಗೂ ಬೆಳಗಾವಿ ಜಿಲ್ಲೆಗಳಿಂದ ಹೊರಗಿನವರು ಬಂದು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ ಎಂಬುದನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.
11 ಗಂಟೆ ವೇಳೆ ಶೇ. 27.82ರಷ್ಟು ಮತದಾನ
ವಿಧಾನಸಭಾ ಉಪಚುನಾವಣೆಯ ಮತದಾನ ಚುರುಕುಗೊಂಡಿದ್ದು, ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ. 27.82ರಷ್ಟು ಮತದಾನ ದಾಖಲಾಗಿದೆ.
ಮಗನ ಹೆಸರಿನ ಬದಲಿಗೆ ತಂದೆಯ ಹೆಸರಿಗೆ ಮಾರ್ಕ್
ಮತಗಟ್ಟೆ ಸಂಖ್ಯೆ 167ರಲ್ಲಿ ಸಿಬ್ಬಂದಿಯ ಎಡವಟ್ಟಿನಿಂದಾಗಿ ಕೆಲಕಾಲ ಗೊಂದಲ ಉಂಟಾಯಿತು. ಮತದಾರರ ಪಟ್ಟಿಯಲ್ಲಿ ಮಗನ ಹೆಸರಿನ ಬದಲು ತಂದೆಯ ಹೆಸರಿಗೆ ಮಾರ್ಕ್ ಮಾಡಿರುವುದರಿಂದ ಮತದಾರರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ನಂತರ ತಪ್ಪು ಸರಿಪಡಿಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.























