ಬಾಗಲಕೋಟೆ(ಕುಳಗೇರಿ ಕ್ರಾಸ್): ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಇದಕ್ಕೆ ಅಪವಾದವೆಂಬಂತೆ ಕರ್ನಾಟಕ ಸರಕಾರ ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಆಂಬ್ಯುಲೆನ್ಸ್ಗೆ ಚಾಲನೆ ನೀಡುವ ಸಮಾರಂಭದ ಆಹ್ವಾನ ಪತ್ರಿಕೆ ಉರ್ದು ಭಾಷೆಯಲ್ಲಿ ಪ್ರಕಟಿಸಿರುವುದು ವಿಪರ್ಯಾಸದ ಸಂಗತಿ ಎಂದು ಭೈರನಹಟ್ಟಿ – ಶಿರೋಳ ಮಠದ ಪೀಠಾದಿಪತಿಗಳಾದ ಶ್ರೀಶಾಂತಲಿಂಗ ಸ್ವಾಮಿಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಯಿಸಿದ ಅವರು ಕನ್ನಡ ಭಾಷೆ ಕರ್ನಾಟಕದ ಆಡಳಿತ ಭಾಷೆಯಾಗಿದೆ. ಕನ್ನಡ ಬರಿ ಭಾಷೆಯಲ್ಲ ಅದು ಸಮಸ್ತ ಕನ್ನಡಿಗರ ಎದೆಬಡಿತವಾಗಿದೆ. ಕರ್ನಾಟಕ ಸರಕಾರದ ನಾಮಫಲಕಗಳು, ಕಡತಗಳು ಕನ್ನಡದಲ್ಲಿಯೇ ಇರಬೇಕು ಜೊತೆಗೆ ಅಧಿಕೃತವಾಗಿ ಪೂರ್ಣಪ್ರಮಾಣದಲ್ಲಿ ಆಡಳಿತ ಕನ್ನಡದಲ್ಲಿಯೆ ಆಗಬೇಕು ಅಂದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಸರಕಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಪ್ರಕಟಣೆಯಲ್ಲಿ ಮಾಡಿದ ದೋಷವನ್ನು ಸರಿಪಡಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.























