ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರ್ಮಾಪಕ ಆರ್. ಚಂದ್ರು ಅವರಿಗೆ ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿಯು (MIU) ಗೌರವ ಡಾಕ್ಟರೇಟ್ (Doctor of Letters – D.Litt.) ನೀಡಿ ಗೌರವಿಸುವುದಾಗಿ ಘೋಷಿಸಿದೆ.
ಚಲನಚಿತ್ರ ಕಲೆ, ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ಸಮಾಜ ಸೇವೆಯಲ್ಲಿ ಅವರು ಮಾಡಿರುವ ಬಹುಮುಖ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ಅರ್ಪಿಸಲಾಗುತ್ತಿದೆ.
ಸಾಧನೆಯ ಹಾದಿ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕೇಶವವಾರ ಎಂಬ ಪುಟ್ಟ ಹಳ್ಳಿಯಿಂದ ಕೇವಲ ನೂರು ರೂಪಾಯಿ ಹಿಡಿದು ಬೆಂಗಳೂರಿಗೆ ಬಂದ ಒಬ್ಬ ಸಾಮಾನ್ಯ ರೈತನ ಮಗ, ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ‘ಆರ್. ಚಂದ್ರು’ ಎಂಬ ಬ್ರ್ಯಾಂಡ್ ಆಗಿ ಬೆಳೆದಿರುವುದು ಯುವಜನತೆಗೆ ಪ್ರೇರಣೆಯಾಗಿದೆ ಎಂದು ವಿಶ್ವವಿದ್ಯಾಲಯವು ಶ್ಲಾಘಿಸಿದೆ.
ಸಿನೆಮಾ ಸಾಧನೆ: ‘ತಾಜ್ ಮಹಲ್’, ‘ಚಾರ್ಮಿನಾರ್’ ನಂತಹ ಭಾವನಾತ್ಮಕ ಚಿತ್ರಗಳಿಂದ ಹಿಡಿದು, ಕನ್ನಡದ ಬಾವುಟವನ್ನು ದೇಶದಾದ್ಯಂತ 4,000 ಸ್ಕ್ರೀನ್ಗಳಲ್ಲಿ ಹಾರಿಸಿದ ‘ಕಬ್ಜ’ ಚಿತ್ರದವರೆಗೆ ಅವರ ಕಲಾತ್ಮಕ ಪಯಣ ಅಭೂತಪೂರ್ವವಾದುದು.
ಸಾಮಾಜಿಕ ಕಳಕಳಿ: ನಿರ್ದೇಶಕರಾಗಿ ಮಾತ್ರವಲ್ಲದೆ ‘ಆರ್ಸಿ ಸ್ಟುಡಿಯೋಸ್’ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡಿರುವ ಅವರು ‘ಅನ್ನದಾತ’ನಾಗಿಯೂ ಗುರುತಿಸಿಕೊಂಡಿದ್ದಾರೆ.
ಪರಿಸರ ಮತ್ತು ಕೃಷಿ ಸೇವೆ: ಶಿಡ್ಲಘಟ್ಟದಲ್ಲಿ ಮಳೆನೀರು ಕೊಯ್ಲು ಮತ್ತು ಆಧುನಿಕ ಕೃಷಿ ಪದ್ಧತಿಯ ಮೂಲಕ ಒಣ ಭೂಮಿಯನ್ನು ಹಸಿರಾಗಿಸಿರುವುದು, ಒಂದು ಲಕ್ಷ ಗಿಡಗಳನ್ನು ನೆಟ್ಟಿರುವುದು ಹಾಗೂ ಕೋವಿಡ್ ಸಮಯದಲ್ಲಿ ಅವರು ಮಾಡಿದ ಮಾನವೀಯ ಕಾರ್ಯಗಳನ್ನು ವಿಶ್ವವಿದ್ಯಾಲಯವು ವಿಶೇಷವಾಗಿ ಪರಿಗಣಿಸಿದೆ.
ಈ ಕುರಿತು ಸಂದೇಶವನ್ನು ಹಂಚಿಕೊಂಡಿರುವ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಹರಿಕುಮಾರ್ ಪಲ್ಲತಡ್ಕ ಅವರು, “ದಕ್ಷಿಣ ಭಾರತದ ಹೆಮ್ಮೆ ಮತ್ತು ಈಶಾನ್ಯ ಭಾರತದ ಚೈತನ್ಯವನ್ನು ಒಂದುಗೂಡಿಸುವ ಉದ್ದೇಶದಿಂದ ಈ ಗೌರವವನ್ನು ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಮುಂದಿನ ಘಟಿಕೋತ್ಸವ ಅಥವಾ ವಿಶೇಷ ಸಮಾರಂಭದಲ್ಲಿ ಆರ್. ಚಂದ್ರು ಅವರಿಗೆ ಈ ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.























