ಹುಬ್ಬಳ್ಳಿ: ಮೂರುಸಾವಿರಮಠದ ಆಸ್ತಿ ವಿಚಾರವಾಗಿ ಅನೇಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು, ಶ್ರೀಮಠದ ಅಧಿಕಾರ ವಹಿಸಿಕೊಂಡ ಮೇಲೆ ಯಾವುದೇ ಆಸ್ತಿಯನ್ನು ಪರಭಾರೆ ಮಾಡಿಲ್ಲ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಬ್ಬೂರಿನಲ್ಲಿರುವ ಶ್ರೀಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆಂದು ವದಂತಿ ಹಬ್ಬಿಸಲಾಗುತ್ತಿದೆ. ಆದರೆ ಗಬ್ಬೂರಿನಲ್ಲಿರುವ ಆಸ್ತಿಯನ್ನು ನಮ್ಮ ಹಿಂದಿನ ಗುರುಗಳಾದ ಡಾ. ಮೂಜಗಂ ಅವರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಕೆಎಲ್ಇ ಸಂಸ್ಥೆಗೆ ದಾನರೂಪವಾಗಿ ನೀಡಿದ್ದಾರೆ.
ಅದೇ ರೀತಿ ಕೇಶ್ವಾಪುರದಲ್ಲಿರುವ ಆಸ್ತಿಯನ್ನೂ ಹಿಂದಿನ ಗುರುಗಳು ಮಾಡಿಕೊಂಡ ಒಪ್ಪಂದದಂತೆ ಮತ್ತು ನ್ಯಾಯಾಲಯದಲ್ಲಿ ಆದ ರಾಜಿ ಸಂಧಾನದ ಮೂಲಕ ಅವರಿಗೆ ಕೊಟ್ಟಿರುತ್ತದೆ. ಇದಾದ ನಂತರ ಇಲ್ಲಿಯವರೆಗೂ ಮೂರುಸಾವಿರಮಠದ ಯಾವುದೇ ಆಸ್ತಿಗಳನ್ನು ಪರಭಾರೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿರಂತರ ಭೂ ಬಾಡಿಗೆ, ಇಮಾರತಿ ಬಾಡಿಗೆ, ಸೂರ್ಯ ಚಂದ್ರರಿರುವವರೆಗೂ ಬಾಡಿಗೆ ಈ ರೀತಿ ಇರತಕ್ಕಂತಹ ಆಸ್ತಿಗಳನ್ನು ನ್ಯಾಯಾಲಯಗಳ ಮುಖಾಂತರ ಮಠಕ್ಕೆ ಕಬ್ಜಾ ಪಡೆದುಕೊಂಡು ಮಠದ ಆಸ್ತಿ ಉಳಿಸುವಲ್ಲಿ, ಸಂರಕ್ಷಿಸುವಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹಾನಗಲ್ಲ ವಿರಕ್ತಮಠದ ಆಸ್ತಿಗಳಿಗೆ ಸಂಬಂಧಿಸಿದ ವಿಷಯಗಳು ಜಿಲ್ಲಾ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಹೀಗಾಗಿ ಸಾರ್ವಜನಿಕರು ಹಾಗೂ ಶ್ರೀಮಠದ ಭಕ್ತರು ಊಹಾಪೋಹಗಳಿಗೆ ಕಿವಿ ಕೊಡದಂತೆ ಮನವಿ ಮಾಡಿಕೊಂಡಿದ್ದಾರೆ.





















