Home Advertisement
Home ನಮ್ಮ ಜಿಲ್ಲೆ ಗದಗ ರೋಣ: ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು, 15 ಮಂದಿ ಗಾಯ

ರೋಣ: ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು, 15 ಮಂದಿ ಗಾಯ

0
373

ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರು ಕ್ರಾಸ್ ಸಮೀಪ ಇಂದು ಗುರುವಾರ ಬೆಳಗ್ಗೆ ಕ್ರೂಸರ್ ಮತ್ತು ಕ್ಯಾಂಟರ್ ವಾಹನಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಗಜೇಂದ್ರಗಡದಿಂದ ರೋಣ ಕಡೆಗೆ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ಕಾರ್ಮಿಕರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಎದುರಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ತೀವ್ರತೆಗೆ ಕ್ರೂಸರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಒಳಗೇ ಸಿಲುಕಿಕೊಂಡಿದ್ದರು.

ಈ ದುರ್ಘಟನೆಯಲ್ಲಿ ಗಜೇಂದ್ರಗಢ ಪಟ್ಟಣದ ಶಿವಾಜಿಪೇಟೆ ನಿವಾಸಿಗಳಾದ ಮರಿಯಂ ಹುನಗುಂದ (55), ಅನ್ನಪೂರ್ಣ ಚಂಗಳಿ (45) ಹಾಗೂ ಸುಜಾತ ಹೊಸಮನಿ (30) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಸ್ಥರಲ್ಲಿ ತೀವ್ರ ದುಃಖ ಮತ್ತು ಶೋಕದ ವಾತಾವರಣ ಮನೆಮಾಡಿದೆ.

ಅಪಘಾತದಲ್ಲಿ ಒಟ್ಟು 15 ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಆರು ಮಂದಿಗೆ ಕೈ ಮತ್ತು ಕಾಲು ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳ ಸ್ಥಿತಿ ಕಂಡು ಆಸ್ಪತ್ರೆಯಲ್ಲಿ ಸಂಬಂಧಿಕರು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿತ್ತು. ಹಲವರು ಆತಂಕದಿಂದ ಆಸ್ಪತ್ರೆ ಆವರಣದಲ್ಲಿ ಕಾದು ನಿಂತಿದ್ದರು.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ವಾಹನಗಳ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯೇ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ. ಈ ಘಟನೆ ಮತ್ತೆ ರಸ್ತೆ ಸುರಕ್ಷತೆಯ ಮಹತ್ವವನ್ನು ನೆನಪಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Previous articleಜ್ಯೋತಿಷಿ ಪ್ರಕರಣ: ಹರಿಪ್ರಸಾದ್ – ಸುರೇಶ್ ಕುಮಾರ್ ನಡುವೆ ವಾಕ್ಸಮರ
Next articleBDK ಗ್ರೂಪ್ ಸಂಸ್ಥಾಪಕ ಖ್ಯಾತ ಕೈಗಾರಿಕೋದ್ಯಮಿ ಭರತ್ ಖಿಮ್ಜಿ ನಿಧನ