ಮಂಗಳೂರು: ಕಾಂಗ್ರೆಸಿಗರು ಗೋಡ್ಸೆಗಿಂತ ಹಲವು ಬಾರಿ ಗಾಂಧಿಯನ್ನು ಕೊಂದಿದ್ದಾರೆ. ಅರ್ಥಾತ್ ಗಾಂಧೀಜಿ ಕಲ್ಪನೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಗಾಂಧೀಜಿ ಆಶಯದ ಗ್ರಾಮ ಸ್ವರಾಜ್ನ್ನು ಅನುಷ್ಠಾನಕ್ಕೆ ತರುತ್ತಿದೆ ಎಂದು ದ.ಕ. ಮಾಜಿ ಸಂಸದ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ, ತಾ.ಪಂ. ಹಾಗೂ ಸದ್ಯದಲ್ಲೇ ಗ್ರಾ.ಪಂ. ಚುನಾವಣೆ ನಡೆಸಬೇಕಿದ್ದರೂ ರಾಜ್ಯ ಸರ್ಕಾರ ಅಧಿಕಾರ ಹಂಚಿಕೆಯ ಗೊಂದಲದಲ್ಲೇ ಮುಳುಗಿದೆ. ಇದೇ ಕಾರಣಕ್ಕೆ ಸ್ಥಳೀಯಾಡಳಿತ ಚುನಾವಣೆಯನ್ನು ಮುಂದೂಡುತ್ತಿದೆ. ಆಡಳಿತದ ವೈಫಲ್ಯವನ್ನು ಮರೆಮಾಚಲು ಕೇಂದ್ರ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ಮಾಡಿರುವುದನ್ನು ನೆಪವಾಗಿಸಿ ಹೋರಾಟ ನಡೆಸಲು ಹೊರಟಿದೆ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿ ರಾಮ್ ಜೀ ಯೋಜನೆ ವಿರುದ್ಧ ಹೋರಾಟ ಮಾಡಿದಷ್ಟು ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಅನುಕೂಲವಾಗಲಿದೆ. ಹಿಂದೆ ನರೇಗಾದಲ್ಲಿ ನಡೆಯುತ್ತಿದ್ದ ಹಗರಣ ತಪ್ಪಿಸಲು ಕೇಂದ್ರ ಯೋಜನೆಯಲ್ಲಿ ಮಾರ್ಪಾಟು ಮಾಡಿದೆ. ಹಗರಣವನ್ನು ವಿರೋಧಿಸುವ ಬದಲು ಕಾಂಗ್ರೆಸಿಗರು ಯೋಜನೆಯನ್ನೇ ವಿರೋಧಿಸುತ್ತಿದ್ದಾರೆ. ಗಾಂಧೀಜಿ ಸಾಯುವಾಗ ಹೇಳಿದ ಹೇ ರಾಮ್ ಹೆಸರನ್ನೇ ನರೇಗಾ ಯೋಜನೆಗೆ ಇರಿಸಲಾಗಿದೆ, ಇದರಲ್ಲಿ ತಪ್ಪೇನಿಲ್ಲ ಎಂದರು.






















