ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಧರಿಸಿರುವ ಸ್ಯಾಂಟೋಸ್ ಕಾರ್ಟಿಯರ್ ಕಂಪನಿಯ ಬೆಲೆಬಾಳುವ ವಾಚ್ ಬಗ್ಗೆ ಸಾಕಷ್ಟು ಗೊಂದಲಗಳಿವೆ. ವಾಚ್ ಖರೀದಿಸಿದ ಬಗ್ಗೆ ಚುನಾವಣಾ ಆಯೋಗಕ್ಕೆ ದಾಖಲೆಗಳನ್ನು ನೀಡಿರುವುದಾಗಿ ಡಿಕೆಶಿ ಹೇಳಿದ್ದಾರೆ. ನಾನೂ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಆದರೆ, ಈ ಬಗ್ಗೆ ಚುನಾವಣಾ ಅಫಿಡೆವಿಟ್ನಲ್ಲಿ ಉಲ್ಲೇಖ ಇಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ದೊಡ್ಡದಾಗಿ ಮಾಡುವುದು ನನಗೂ ಇಷ್ಟವಿಲ್ಲ. ಡಿ.ಕೆ ಶಿವಕುಮಾರ್ ನನ್ನ ಆತ್ಮೀಯ ಗೆಳೆಯ. ಆದರೆ, ರಾಜಕೀಯದಲ್ಲಿ ಗೆಳೆತನವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಈ ಸಂಬಂಧ ಬೆಳಗಾವಿಯ ಅಧಿವೇಶನದಲ್ಲಿ ಖಂಡಿತವಾಗಿಯೂ ಚರ್ಚೆ ಮಾಡುತ್ತೇವೆ. ಇಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮುಖ್ಯ ಅಲ್ಲ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ರೈತರ, ಹಿಂದುಗಳ ವರ್ಗಗಳ ಕಲ್ಯಾಣಕ್ಕೋಸ್ಕರ ಅನೇಕ ಸಮಸ್ಯೆಗಳ ಮೇಲೆ ಪ್ರಸ್ತಾಪ ಮಾಡುತ್ತೇವೆ ಎಂದರು.























