ಪಣಜಿ(ಕಾಣಕೋಣ): ಗೋವಾದ ಕಾಣಕೋಣದಲ್ಲಿರುವ ಗೋಕರ್ಣ ಪರ್ತಗಾಳಿ ಮಠಕ್ಕೆ ಬುಧವಾರ ಸಂಜೆ ಶ್ರೀರಾಮದಿಗ್ವಿಜಯ ರಥಯಾತ್ರೆಯ ಆಗಮನವಾಗಿದೆ. ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಭಕ್ತಾದಿಗಳು, ಸುಮಂಗಲಿಯರು ಪೂರ್ಣಕುಂಭ ಸ್ವಾಗತ ಕೋರಿ ರಥವನ್ನು ಬರಮಾಡಿಕೊಂಡರು. ಬದರಿನಾಥದಿಂದ ಆರಂಭಗೊಂಡಿದ್ದ ರಥಯಾತ್ರೆಯು 39 ದಿನಗಳಲ್ಲಿ 120 ಶ್ರೀರಾಮ ಜಪಕೇಂದ್ರಗಳಿಗೆ ಭೇಟಿ ನೀಡಿದೆ. ಸುಮಾರು 8200 ಕಿ.ಮೀ. ಪ್ರವಾಸ ಪೂರ್ಣಗೊಳಿಸಿ ಶ್ರೀರಾಮ ದಿಗ್ವಿಜಯ ರಥಯಾತ್ರೆಯು ಶ್ರೀಮಠಕ್ಕೆ ಆಗಮಿಸಿದೆ.
ಹೊನ್ನಾವರದ ಸಂತೋಷ ಪೈ ಬದರಿನಾಥದಿಂದ ಕಾಣಕೋಣವರೆಗಿನ 8,000 ಕಿ.ಮೀ. ರಥದ ಸಾರಥ್ಯವನ್ನು ವಹಿಸಿದ್ದರು. ಮಳೆ, ಚಳಿ, ಬಿಸಿಲು, ಘಟ್ಟ, ಗುಡ್ಡ ರಸ್ತೆಯ ಮಾರ್ಗವಾಗಿ ಯಶಸ್ವಿಯಾಗಿ ರಾಮದಿಗ್ವಿಜಯ ರಥಯಾತ್ರೆ ಪೂರ್ಣಗೊಂಡಿದೆ. ನನ್ನ ಹಿಂದೆ ಶ್ರೀರಾಮನ ಬಲವಿದೆ ಇದರಿಂದಾಗಿ ಈ ರಥಯಾತ್ರೆ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಸಂತೋಷ ಪೈ ಹೇಳಿದ್ದಾರೆ. ಕಾಣಕೋಣದಲ್ಲಿರುವ ಗೋಕರ್ಣ ಪರ್ತಗಾಳಿ ಮಠದ 550ನೇ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಯು ಅ. 18ರಂದು ಪ್ರವಾಸ ಆರಂಭಿಸಿತ್ತು.























