Bengaluru Rain. ಉದ್ಯಾನ ನಗರಿ ಬೆಂಗಳೂರಿನಲ್ಲಿ ಗುರುವಾರ ಸಂಜೆ ಮಳೆ ಅಬ್ಬರಿಸುತ್ತಿದೆ. ವಿವಿಧ ಬಡಾವಣೆಗಳಲ್ಲಿ 5 ಗಂಟೆಯಿಂದ ಆರಂಭವಾದ ಮಳೆ ಜೋರಾಗಿ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ.
ಗುರುವಾರ ಬೆಳಗ್ಗೆಯಿಂದ ನಗರದಲ್ಲಿ ಬಿಸಿಲು ಇತ್ತು. ಸಂಜೆ 4 ಗಂಟೆಯ ಬಳಿಕ ಮೋಡ ಕವಿದಿದ್ದು 5 ಗಂಟೆಗೆ ಮಳೆ ಆರಂಭವಾಯಿತು. ಬುಧವಾರ ರಾತ್ರಿಯೂ ನಗರದಲ್ಲಿ ಭಾರೀ ಮಳೆಯಾಗಿತ್ತು.
ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಹಲವು ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಟ್ರಾಫಿಕ್ ಅಪ್ಡೇಟ್: ಈ ಸ್ಥಳಗಳಲ್ಲಿ ಮಳೆನೀರು ನಿಂತಿರುವುದರಿಂದ ನಿಧಾನಗತಿಯ ವಾಹನ ಸಂಚಾರವಿರುತ್ತದೆ.
- ಹಲಸೂರು ಕಡೆಯಿಂದ ಸೋನಿ ವರ್ಲ್ಡ್ ಕಡೆಗೆ
- ಅಗರ ಕಡೆಯಿಂದ ಆಟೋಮಾರ್ಟ್ ಕಡೆಗೆ
- ಬಿಟಿಎಂ 2 ನೇ ಹಂತ ಕಡೆಯಿಂದ ಮಡಿವಾಳ ಲೇಕ್ ರಸ್ತೆ ಕಡೆಗೆ
- ಕ್ಯಾಶ್ ಫಾರ್ಮಸಿ ಕಡೆಯಿಂದ ಆಶೀರ್ವಾದ ಜಂಕ್ಷನ್ ಕಡೆಗೆ
- ವೀರಸಂದ್ರ ಕಡೆಯಿಂದ ಹೊಸ ರಸ್ತೆಯ ಕಡೆಗೆ
- ರೂಪೇನ ಅಗ್ರಹಾರ ಕಡೆಯಿಂದ ಸಾಗರ್ ಜಂಕ್ಷನ್ ಕಡೆಗೆ
- ಹೋಸ್ಟರ್ ಆಸ್ಪತ್ರೆ ಕಡೆಯಿಂದ ಸಾಗರ್ ಜಂಕ್ಷನ್
- ಫೋರ್ಟಿಸ್ ಆಸ್ಪತ್ರೆ ಕಡೆಯಿಂದ ಬಿಳೇಕಹಳ್ಳಿ ಕಡೆಗೆ
- NGV ಮುಖ್ಯ ಗೇಟ್ ಕಡೆಯಿಂದ NGV ಹಿಂದಿನ ಗೇಟ್ ಕಡೆಗೆ
- ಮುನಸೆಮರದ ಕಡೆಯಿಂದ ಬಿನ್ನಿ ಮಿಲ್ ಕಡೆಗೆ
- ಮಡಿವಾಳ ಪಿಎಸ್ ಕಡೆಯಿಂದ ಎಸ್ಪಿ ರಸ್ತೆ ಕಡೆಗೆ.
- SJP ರಸ್ತೆ ಕಡೆಯಿಂದ ಟೌನ್ಹಾಲ್ ಕಡೆಗೆ
ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಎಂಡಿಸಿ) ಪ್ರಕಾರ ಸೆಪ್ಟೆಂಬರ್ 18 ರಿಂದ ಸೆಪ್ಟೆಂಬರ್ 27ರ ತನಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆ. ಸೆಪ್ಟೆಂಬರ್ 23 ರಿಂದ 25ರ ತನಕ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯಿದೆ.
ಸೆಪ್ಟೆಂಬರ್ 18 ರಿಂದ ಸೆಪ್ಟೆಂಬರ್ 27ರ ತನಕ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರ ತನಕ ಚದುರದಂತೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಸೆಪ್ಟೆಂಬರ್ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ.