ನದಿಗೆ ಹಾರಿದ ಪದವೀಧರೆ: ಯುವತಿಗಾಗಿ  ಶೋಧ

ಮಂಡ್ಯ: ಸೇತುವೆ ಮೇಲಿಂದ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗ ಪಟ್ಟಣದ ಉತ್ತರ ಕಾವೇರಿ ಬಳಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಪ್ರಸಾದಹಳ್ಳಿ ಗ್ರಾಮದ ಸಿಂಚನ (24) ಕಾವೇರಿ ನದಿಗೆ ಹಾರಿದ ಯುವತಿ. ಸಿಂಚನ ಎಂಸಿಎ ಪದವೀಧರೆಯಾಗಿದ್ದು, ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇದರಿಂದ ಖಿನ್ನತೆಗೊಳಗಾಗಿದ್ದಳು ಎಂದು ಹೇಳಲಾಗುತ್ತಿದೆ.
ನಿನ್ನ ರಾತ್ರಿ ಸುಮಾರು 8 ಗಂಟೆ ಸಂದರ್ಭದಲ್ಲಿ ಸೇತುವೆ ಮೇಲಿಂದ ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾಳೆ. ಇದನ್ನು ಕಂಡ ಅದೇ ದಾರಿಯಲ್ಲಿ ಹೋಗುತ್ತಿದ್ದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶ್ರೀರಂಗಪಟ್ಟಣ ಟೌನ್ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬಂದು ಮೊಬೈಲ್ ಬೆಳಕಿನಲ್ಲೇ ಹುಡುಕಾಟ ನಡೆಸಿದಾಗ ಬ್ಯಾಗ್‌, ಚಪ್ಪಲಿ ಹಾಗೂ ಆಧಾರ್‌ಕಾರ್ಡ್ ಸಿಕ್ಕಿದೆ. ಇದರ ಆಧಾರದ ಮೇಲೆ ಯುವತಿಯ ಮಾಹಿತಿ ಕಲೆ ಹಾಕಲಾಗಿದ್ದು ತಡರಾತ್ರಿ ಅವರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಿದ್ದಾರೆ.ಇಂದು ಬೆಳಗ್ಗೆ ಮತ್ತೆ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ನದಿ ನೀರು ಹೆಚ್ಚಿರುವುದರಿಂದ ದೇಹ ಕೊಚ್ಚಿಹೋಗಿದೆ ಎಂದು ಶಂಕಿಸಲಾಗುತ್ತಿದೆ.ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಹುಡುಕಾಟ ನಡೆಯುತ್ತಿದೆ. ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.