ಸುರೇಶ್ ಬಾಬುಗೆ ಮತ್ತೆ ಲೋಕಾ ಗಾಳ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕೋಲಾರ ತಾಲೂಕು ಭೂ ದಾಖಲೆಗಳ ಇಲಾಖೆಯ ಸರ್ವೇ ಸೂಪರ್ ವೈಸರ್ ಸುರೇಶ್ ಬಾಬುಗೆ ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಲೋಕಾಯುಕ್ತ ಅಧಿಕಾರಿಗಳು ಗಾಳ ಹಾಕಿದ್ದಾರೆ.
ಗುರುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಕೋಲಾರ ಮಾಲೂರು ಹೊಸಕೋಟೆ ಮತ್ತಿತರ ಆರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರ ಅಧಿಕೃತ ಗಳಿಕೆಗಿಂತ ಶೇ. 145ರಷ್ಟು ಅಧಿಕ ಆದಾಯವನ್ನು ಪತ್ತೆ ಹಚ್ಚಿದ್ದಾರೆ.
ಕೋಲಾರದಲ್ಲಿರುವ ಸುರೇಶ್ ಬಾಬು ಮನೆ ಮತ್ತು ಕಚೇರಿ, ಮಾಲೂರು ತಾಲೂಕು ನಿಡಘಟ್ಟದಲ್ಲಿರುವ ಅವರ ಮನೆ ಮತ್ತು ಜಮೀನುಗಳು ಹಾಗೂ ಸ್ನೇಹಿತರ ಮನೆ ಸೇರಿ 6 ಕಡೆಗಳಲ್ಲಿ ಗುರುವಾರ ಇಡೀ ದಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸುರೇಶ್ ಬಾಬು ಅವರ ಇಬ್ಬರು ಅಣ್ಣಂದಿರ ಮನೆ, ತಮ್ಮ ವೈದ್ಯನ ಮನೆ, ಗೆಳೆಯನಾದ ನಿವೃತ್ತ ಪಿಡಿಒ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಸುರೇಶ್ ಬಾಬು ಅಣ್ಣಂದಿರಾದ ಲಕ್ಷ್ಮೀನಾರಾಯಣ, ವಿಜಯ್ ಕುಮಾರ್ ವಾಸವಿರುವ ಮಾಲೂರು ತಾಲೂಕು ನಿಡಘಟ್ಟ ಗ್ರಾಮದ ಮನೆ ಹಾಗೂ ತಮ್ಮ ಕೋಲಾರದ ಡಾ.ಪ್ರಸನ್ನಕುಮಾರ್ ಮನೆ, ಕೋಲಾರ ನಗರದ ನಿವೃತ್ತ ಪಿಡಿಒ ನಾಗರಾಜ್ ಮನೆಗೆ ದಾಳಿ ಮಾಡಲಾಗಿದೆ.
ಕಳೆದ 4 ತಿಂಗಳ ಹಿಂದೆಯಷ್ಟೆ ಸುರೇಶ್ ಬಾಬು ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿತ್ತು. ಆ ವೇಳೆ ಕೋಲಾರ ಮತ್ತು ಮಾಲೂರು ಸರ್ವೇ ಇಲಾಖೆಗಳಿಗೆ ಸಂಬಂಧಿಸಿದ ನೂರಾರು ಸರ್ಕಾರಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಈ ಪ್ರಕರಣದ ತನಿಖೆ ಇನ್ನೂ ಮುಂದುವರೆದಿರುವಾಗಲೇ ಆದಾಯ ಮೀರಿದ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರು ಗುರುವಾರ ಎರಡನೇ ದಾಳಿ ನಡೆಸಿದ್ದಾರೆ.

8.18 ಕೋಟಿ ರೂ. ಆಸ್ತಿ ಪತ್ತೆ
ಸುರೇಶ್ ಬಾಬು ಮತ್ತು ಅವ್ರಿಗೆ ಆಪ್ತರ 6 ಕಡೆಗಳಲ್ಲಿ ದಾಳಿ ನಡೆದಿದ್ದು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಲೋಕಾಯುಕ್ತ ಸಿಬ್ಬಂದಿಯನ್ನು ದಾಳಿಗೆ ಬಳಸಿಕೊಳ್ಳಲಾಗಿತ್ತು. ದಾಳಿಯ ವೇಳೆ ಸುಮಾರು ೩೦ ಲಕ್ಷ ರೂ ಮೌಲ್ಯದ ೩ ನಿವೇಶನಗಳು, ೨.೮೧ ಕೋಟಿ ರೂ ಮೌಲ್ಯದ ಐದು ಮನೆಗಳು, ೩.೩೮ ಕೋಟಿರೂ ಬೆಲೆಯ ಐದು ಕೃಷಿ ಭೂಮಿ ಸೇರಿದಂತೆ ಒಟ್ಟು ೬.೫೦ ಕೋಟಿರೂ. ಗಳ ಸ್ಥಿರಾಸ್ತಿ ಪತ್ತೆಯಾಗಿದೆ.
ಇದೇ ರೀತಿ ೩ ಲಕ್ಷ ರೂ ನಗದು ಹಣ, ೧೮.೨೪ ಲಕ್ಷರೂ. ಗಳ ಬೆಳ್ಳಿ ಹಾಗೂ ಚಿನ್ನಾಭರಣ, ೮೦ ಲಕ್ಷ ರೂ ಬೆಳೆಯ ಒಂಬತ್ತು ವಾಹನಗಳು ಹಾಗೂ ಇತರೆ ೬೬. ೮೭ ಲಕ್ಷ ರೂ. ಗಳ ವಸ್ತುಗಳು ಸೇರಿದಂತೆ ಒಟ್ಟು ೧.೬೮ ಕೋಟಿರೂ. ಗಳ ಚರಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಚರ ಮತ್ತು ಸ್ಥಿರಾಸ್ತಿಗಳ ಒಟ್ಟು ಮೊತ್ತ ೮.೧೮ ಕೋಟಿ ರೂ. ಗಳಾಗಿದ್ದು ಇದು ಅವರ ಆದಾಯಕ್ಕಿಂತ ಶೇ. ೧೪೫ರಷ್ಟು ಹೆಚ್ಚಾಗಿದೆ. ಇದನ್ನು ಆದಾಯ ಮೀರಿದ ಅಕ್ರಮ ಆಸ್ತಿ ಎಂದು ಪರಿಗಣಿಸಿ ಲೋಕಾಯುಕ್ತದಲ್ಲಿ ಕೇಸು ದಾಖಲಿಸಲಾಗಿದೆ.