ಜನಿವಾರ – ಯಜ್ಞೋಪವೀತ – ಬ್ರಹ್ಮಸೂತ್ರ

ದೀಕ್ಷಾವಿಧಾನ ಬಹುತೇಕ ಎಲ್ಲ ಮಂತ್ರಗಳ ಉಪದೇಶದಲ್ಲಿಯೂ ಇದ್ದಿರುತ್ತದೆ. ಮಂತ್ರವನ್ನು ಉಪದೇಶ ಮಾಡುವ ಗುರುವು ಶಿಷ್ಯನಿಗೆ ಒಂದಿಷ್ಟು ನಿಯಮಗಳ ಕಟ್ಟಳೆಗಳನ್ನು ವಿಧಿಸುತ್ತಾನೆ. ಆ ಕಟ್ಟಳೆಗಳು ಕೆಲವೊಮ್ಮೆ ಜೀವನಪರ್ಯಂತವೂ ಇರುವಂಥದ್ದಾಗಿರುತ್ತವೆ. ದೀಕ್ಷೆ ಅಂದರೆ ವ್ರತ, ನಿಯಮಗಳ ಸಮೂಹ. ಆ ನಿಯಮಗಳು ಜೀವನಪರ್ಯಂತವೂ ಇರುವುದಕ್ಕೋಸ್ಕರ ಕೆಲವು ಚಿಹ್ನೆಗಳನ್ನು ಕೊಡುತ್ತಾರೆ. ಆ ಚಿಹ್ನೆಗಳಿಗೆ ವಿಶಿಷ್ಟವಾದ ಮಹತ್ವವಿದೆ.
ಎಲ್ಲ ಮತಧರ್ಮಗಳಲ್ಲಿಯೂ ಈ ರೀತಿಯ ಚಿಹ್ನೆಗಳಿಗೆ ಉದಾಹರಣೆ ಸಿಗುತ್ತದೆ. ಕ್ರಿಶ್ಚಿಯನ್ನರು ಧರಿಸುವ ಶಿಲುಬೆಯ ಆಕಾರದ ಚಿಹ್ನೆ, ಮುಸ್ಲಿಮರು ಧರಿಸುವ ವಿಶಿಷ್ಟವಾದ ಟೋಪಿ, ಶೈವರು ಧರಿಸುವ ಲಿಂಗ, ವೈಷ್ಣವರು ಧರಿಸುವ ಮುದ್ರೆಗಳು ಮುಂತಾದವುಗಳು. ‘ಜನಿವಾರ’ ಅಥವಾ ‘ಯಜ್ಞೋಪವೀತ’ ಈ ಸಾಲಿನಲ್ಲೇ ಬರುತ್ತದೆ. ಯಜ್ಞೋಪವೀತ ಎಂಬ ಶಬ್ದವೇ ಪ್ರಾಚೀನ ಶಬ್ದ. ಯಜ್ಞದ ಅನುಷ್ಠಾನಕ್ಕಾಗಿ ಸ್ವೀಕರಿಸಿರುವ ವ್ರತಗಳ ಸ್ಮರಣೆಗೋಸ್ಕರ ಯಜ್ಞೋಪವೀತವನ್ನು ಸತತ ಧರಿಸಿರಬೇಕು. ಉಪನಯನ ಸಂಸ್ಕಾರದಲ್ಲಿ ಮಂತ್ರೋಪದೇಶ ಕೊಡುವುದಕ್ಕಿಂತ ಮುಂಚೆಯೇ ಯಜ್ಞೋಪವೀತ ಧಾರಣೆಯನ್ನು ಮಾಡಿಸಲಾಗುತ್ತದೆ. ಯಾಕೆಂದರೆ ವ್ರತದಲ್ಲಿರುವಾಗಲೇ ಮಂತ್ರವನ್ನು ಸ್ವೀಕರಿಸಬೇಕು. ಮುಂದೆ ಜೀವನದುದ್ದಕ್ಕೂ ಮಂತ್ರದ ಅನುಸಂಧಾನ ಇರಬೇಕಾಗುತ್ತದೆ. ಹಾಗಾಗಿಯೇ ಯಜ್ಞೋಪವೀತವನ್ನು ಸತತ ಧರಿಸಬೇಕಾಗುತ್ತದೆ.
ಯಜ್ಞೋಪವೀತ ಕೇವಲ ಚಿಹ್ನೆ ಮಾತ್ರವಲ್ಲ. ಅದರಲ್ಲಿ ಒಂಬತ್ತು ತಂತುಗಳು ಇದ್ದು, ಆ ತಂತುಗಳಲ್ಲಿ ಒಂಬತ್ತು ದೇವತೆಗಳನ್ನು ಆವಾಹನೆ ಮಾಡುತ್ತಾರೆ. ಓಂಕಾರ, ಅಗ್ನಿ, ನಾಗ, ಸೋಮ, ಪಿತೃ, ಪ್ರಜಾಪತಿ, ವಾಯು, ಸೂರ್ಯ, ವಿಶ್ವೇದೇವ ಎಂಬ ಒಂಬತ್ತು ದೇವತೆಗಳನ್ನು ಆ ಒಂಬತ್ತು ತಂತುಗಳಲ್ಲಿ ಆವಾಹಿಸಲಾಗುತ್ತದೆ. ಈ ಒಂಬತ್ತು ತಂತುಗಳನ್ನು ಬ್ರಹ್ಮಗ್ರಂಥಿಯ ಮೂಲಕ ಒಟ್ಟಿಗೆ ಸೇರಿಸಲಾಗುತ್ತದೆ. ಬ್ರಹ್ಮಗ್ರಂಥಿ ಅಥವಾ ಬ್ರಹ್ಮಗಂಟು ಈ ಒಂಬತ್ತು ತಂತುಗಳನ್ನು ವಿಶಿಷ್ಟ ರೀತಿಯಲ್ಲಿ ಸೇರಿಸುತ್ತದೆ. ಎಲ್ಲ ದೇವತೆಗಳು ಆ ಪರಬ್ರಹ್ಮನಲ್ಲಿ ಒಂದಾಗುತ್ತವೆ ಎಂಬುದು ಇದರ ಅರ್ಥ.
ಯಜ್ಞೋಪವೀತವನ್ನು ‘ಬ್ರಹ್ಮಸೂತ್ರ’ ಎಂಬುದಾಗಿಯೂ ಕರೆಯುತ್ತಾರೆ. ಬ್ರಹ್ಮ ಅಂದರೆ ಪರಮಾತ್ಮ. ಪರಮಾತ್ಮನು ಎಲ್ಲ ಜೀವಗಳ ಒಳಗೆ ಸೂತ್ರದ ರೂಪದಲ್ಲಿ ಅಡಗಿದ್ದಾನೆ. ‘ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ’ (೭.೭) ಎಂಬುದಾಗಿ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಪರಮಾತ್ಮ ಎಂಬ ಒಂದೇ ಸೂತ್ರದಲ್ಲಿ ಎಲ್ಲ ಜೀವಗಳು ಮತ್ತು ಎಲ್ಲ ಜಡಗಳು ಪೋಣಿಸಲ್ಪಟ್ಟಿವೆ. ಒಂದು ದಾರದಲ್ಲಿ ಅನೇಕ ವಿಧದ ಮಣಿಗಳು ಪೋಣಿಸಲ್ಪಟ್ಟಂತೆ, ಈ ಎಲ್ಲ ವಿವಿಧ ಜೀವಿಗಳು-ಜಡಗಳು ಪರಮಾತ್ಮನೆಂಬ ದಾರದಲ್ಲಿ ಪೋಣಿಸಲ್ಪಟ್ಟಿವೆ. ಅಂತಹ ಪರಮಾತ್ಮನನ್ನು ನೆನಪಿಸುವುದರಿಂದಲೇ ಯಜ್ಞೋಪವೀತಕ್ಕೆ ಬ್ರಹ್ಮಸೂತ್ರವೆಂಬ ಹೆಸರು. ಇಂತಹ ಸೂತ್ರವನ್ನು ಕಾಣುವವರಾದ್ದರಿಂದಲೇ ಸಂನ್ಯಾಸಿಗಳಿಗೆ ಹೊರಗಿನ ಭೌತಿಕರೂಪದ ಈ ಯಜ್ಞೋಪವೀತವಿರುವುದಿಲ್ಲ.
ಪ್ರತಿಯೊಂದು ಧರ್ಮದ ಚಿಹ್ನೆಗಳಿಗೂ ಇಂಥದ್ದೇ ಮಹತ್ವವಿರುತ್ತವೆ. ಅದ್ದರಿಂದ ಇಂತಹ ಯಾವುದೇ ಧಾರ್ಮಿಕ ಚಿಹ್ನೆಗಳಿಗೆ ಅವಮಾನ ಮಾಡಬಾರದು.