ರಾಯಚೂರು: ಬೇನಾಮಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ನಕಲಿ ಚಿನ್ನವನ್ನೇ ಅಡವಿಟ್ಟು ಅದರ ಮೇಲೆ ಸಾಲ ಪಡೆದ ಮ್ಯಾನೇಜರ್ 10 ಕೋಟಿ ವಂಚಿಸಿದ ಘಟನೆ ನಗರದ ಮಹಾರಾಷ್ಟ್ರ ಬ್ಯಾಂಕ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ವ್ಯವಸ್ಥಾಪಕ(ಮ್ಯಾನೇಜರ್) ಕೆ. ನರೇಂದ್ರರೆಡ್ಡಿ ಎಂಬುವವರು ಬೇನಾಮಿ ಹೆಸರುಗಳಲ್ಲಿ 105 ಖಾತೆಗಳನ್ನು ತೆರೆದು ಆ ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು ಸುಮಾರು 10.97 ಕೋಟಿಯಷ್ಟು ಸಾಲವನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾನೆ. ಈ ಪ್ರಕರಣ ಬ್ಯಾಂಕ್ನ ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಪತ್ತೆಯಾಗಿದೆ.
ನಕಲಿ ಗೋಲ್ಡ್ ಲೋನ್ ಖಾತೆಗಳಿಂದ 8 ಸಂಬಂಧಿಕರ ಅಕೌಂಟ್ಗೆ ಹಣ ವರ್ಗಾವಣೆ ಮಾಡಿದ್ದಾನೆ. ಹಿಂದಿನ ಬ್ಯಾಂಕ್ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದ. ವಂಚನೆ ಬಯಲು ಆಗುತ್ತಿದ್ದಂತೆ ಬ್ಯಾಂಕ್ನಿಂದ ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ಪರಾರಿಯಾಗಿದ್ದಾನೆ. ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ವಿರುದ್ಧ ಸೈಬರ್ ಠಾಣೆಯಲ್ಲಿ
ದೂರು ದಾಖಲಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಪ್ರಾದೇಶಿಕ ವ್ಯವಸ್ಥಾಪಕ ಸುಚೇತ್ ನೀಡಿರುವ ದೂರಿನ ಮೇರೆಗೆ ಬ್ಯಾಂಕ್ ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸೈಬರ್ ಠಾಣೆಯ ಪೊಲೀಸ್ ಅಧಿಕಾರಿ ರಾಜಕುಮಾರ ತಿಳಿಸಿದ್ದಾರೆ.