ಕಲಬುರಗಿ: ಪೊಲೀಸ್ ಠಾಣೆಯಲ್ಲೇ ಇಸ್ಪೀಟ್ ಆಡಿದ್ದ ಐವರು ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಠಾಣೆಯ ಎಎಸ್ಐ ಮಹಿಮೂದ್ ಮಿಯಾ, ಹೆಡ್ಕಾನ್ಸಟೇಬಲ್ ನಾಗರಾಜ್, ಸಾಯಿಬಣ್ಣ, ಇಮಾಮ್, ಪಿಸಿ ನಾಗಭೂಷಣ್ ಅಮಾನತುಗೊಂಡ ಅಧಿಕಾರಿಗಳು.
ವಾಡಿ ಪೊಲೀಸ್ ಠಾಣೆಯ ಮೊದಲನೇ ಅಂತಸ್ತಿನಲ್ಲಿ, ಖಾಕಿ ಬಟ್ಟೆಯಲ್ಲೇ ನಾಲ್ಕೈದು ಪೊಲೀಸರು ಸೇರಿಕೊಂಡು ಇಸ್ಪೀಟ್ ಆಟ ಆಡುತ್ತಿದ್ದ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಪೊಲೀಸ್ ಇಲಾಖೆ ತಲೆ ತಗ್ಗಿಸುವ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಐವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಇನ್ನು, ಪೊಲೀಸರು ಆಗಾಗ ಠಾಣೆಯಲ್ಲಿ ಇಸ್ಪೀಟ್ ಆಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಕಾರಣ ಕೇಳಿ ವಾಡಿ ಠಾಣೆ ಪಿಎಸ್ಐ ತಿರುಮಲೇಶ್ ಅವರಿಗೆ ನೋಟಿಸ್ ನೀಡಿದ್ದಾರೆ.