‘ವಿದ್ಯಾಪತಿ’ಗೆ ಸಿಕ್ಕರು ಖಡಕ್ ವಿಲನ್…

ನಾಗಭೂಷಣ್ ‘ವಿದ್ಯಾಪತಿ’ಗೆ ಖಡಕ್ ವಿಲನ್ ಗರುಡ ರಾಮ್ ಎಂಟ್ರಿ

ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ..ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್

ಡಾಲಿ ಪಿಕ್ಚರ್ಸ್ ನಿರ್ಮಾಣದಡಿ ಮೂಡಿ ಬರ್ತಿರುವ ವಿದ್ಯಾಪತಿ ಸಿನಿಮಾಗೀಗ ಬಹುಬೇಡಿಕೆಯ ಖಳನಾಯಕ ಗರುಡ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಕೆಜಿಎಫ್, ಸಲಾರ್, ಬಘೀರ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಖಡಕ್ ವಿಲನ್ ಗರುಡ ರಾಮ್ ನಾಗಭೂಷಣ್ ಎದುರು ತೊಡೆ ತಟ್ಟಿದ್ದಾರೆ.

ರಾಮಚಂದ್ರ ರಾಜು ಹೆಸರಿಗಿಂತ ಗರುಡ ಅಂತಾನೆ ಖ್ಯಾತಿಗಳಿಸಿರುವ ಅವರು ವಿದ್ಯಾಪತಿ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಗರುಡ ರಾಮ್ ಎಂಟ್ರಿಯ ಮೇಕಿಂಗ್ ವಿಡಿಯೋ ಮೂಲಕ ಚಿತ್ರತಂಡ ಅವರನ್ನು ಸ್ವಾಗತಿಸಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ರಾಮಚಂದ್ರ ರಾಜು ಕಾಣಿಸಿಕೊಂಡಿದ್ದಾರೆ. ಗರುಡ ರಾಮ್ ಹಾಗೂ ನಾಗಭೂಷಣ್ ಇವರಿಬ್ಬರ ಜುಲಗ್ಬಂಧಿ ಹೇಗಿರಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ.

ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್ ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ. ಕರಾಟೆ ಮಾಸ್ಟರ್ ಅವತಾರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ.

ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದು, ಏಪ್ರಿಲ್ 10ಕ್ಕೆ ವಿದ್ಯಾಪತಿ ಸಿನಿಮಾ ತೆರೆಗೆ ಬರಲಿದೆ.