ಯಾದಗಿರಿ: ಮತಾಂತರಕ್ಕೆ ಪ್ರಚೋದನೆ ಆರೋಪದ ಮೇರೆಗೆ ಲಕ್ಷ್ಮೀ ನಗರ ಬಡಾವಣೆಯ ನಾಗರಿಕರು ಇಬ್ಬರು ಯುವತಿಯರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.
ಕ್ರೈಸ್ತ ಧರ್ಮ ಪ್ರಚಾರ ಮಾಡುವ ನೆಪದಲ್ಲಿ ಕರಪತ್ರಗಳನ್ನು ಹಂಚಿಕೆ ಮಾಡಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ. ಈ ಕುರಿತು ಬಡಾವಣೆಯ ಸುರೇಶ, ನರೇಶ, ರಾಜಶೇಖರ, ಉಮೇಶರೆಡ್ಡಿ, ಶಿವಕುಮಾರ ಎಂಬುವವರು ದೂರು ನೀಡಿ, ಬಡಾವಣೆಯಲ್ಲಿ ಹಲವು ಹಿಂದೂ ಮನೆಗಳಿಗೆ ತೆರಳಿ ಹಿಂದೂ ದೇವರುಗಳ ಬಗ್ಗೆ ಕೇವಲವಾಗಿ ಮಾತನಾಡಿ, ಬಲವಂತವಾಗಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ನಗರ ಠಾಣೆಗೆ ಭೇಟಿ ನೀಡಿದ ಭಜರಂಗ ದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಪ್ರಮುಖರು ಈ ಕುರಿತು ತನಿಖೆ ಮಾಡಲು ಒತ್ತಾಯಿಸಿದರು. ಇಲ್ಲವಾದಲ್ಲಿ ಹೋರಾಟದ ಎಚ್ಚರಿಕೆ ನೀಡಿದರು.