SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿಗೆ ಪ್ರವೇಶಿಸಲಿದೆ ಬಿಜೆಪಿ ಪಾದಯಾತ್ರೆ; ಕಂಪ್ಲಿಯಲ್ಲಿಂದು ಕೇಸರಿ ಶಕ್ತಿ ಪ್ರದರ್ಶನ

ಬಳ್ಳಾರಿಗೆ ಪ್ರವೇಶಿಸಲಿದೆ ಬಿಜೆಪಿ ಪಾದಯಾತ್ರೆ; ಕಂಪ್ಲಿಯಲ್ಲಿಂದು ಕೇಸರಿ ಶಕ್ತಿ ಪ್ರದರ್ಶನ

0
52

ಬಳ್ಳಾರಿ: ವಾಲ್ಮೀಕಿ ಹಗರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಭಷ್ಟಾಚಾರ ವಿರುದ್ಧದ ಬಿಜೆಪಿ ಪಾದಯಾತ್ರೆ ಗಣಿ ಖ್ಯಾತಿಯ ಬಳ್ಳಾರಿ ಜಿಲ್ಲೆಯ ಹೆಬ್ಬಾಗಿಲು ಗಂಡುಗಲಿ ಕುಮಾರರಾಮನ (ಕಂಪ್ಲಿ) ಕೋಟೆಗೆ ಸೆ. 6ರಂದು ಪ್ರವೇಶ ಮಾಡಲಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಖಂಡಿಸಿ, ಬಿಜೆಪಿ ಪಾದಯಾತ್ರೆಯೊಂದಿಗೆ ಬೃಹತ್ ಬಹಿರಂಗ ಸಭೆಯ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದೆ. ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಅದ್ಧೂರಿ ಸ್ವಾಗತದೊಂದಿಗೆ ಕಂಪ್ಲಿಗೆ ಪ್ರವೇಶಿಸುವ ಪಾದಯಾತ್ರೆಯನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಲಿಂಗಸುಗೂರಿನಿಂದ ಆರಂಭಗೊಂಡು ಬಳ್ಳಾರಿಯತ್ತ ಸಾಗುತ್ತಿರುವ ಪಾದಯಾತ್ರೆ ತುಂಗಭದ್ರ ನದಿಯ ಕಂಪ್ಲಿ-ಕೋಟೆ ಪ್ರದೇಶದ ಮೂಲಕ ಕಂಪ್ಲಿ ತಾಲೂಕು ಪ್ರವೇಶಿಸಲಿದೆ. ವಿವಿಧ ಕಲಾ ತಂಡಗಳ ಮೂಲಕ ಸ್ವಾಗತಿಸಲು ಸ್ಥಳೀಯವಾಗಿ ಸಜ್ಜುಗೊಂಡಿದೆ.

ಪಾದಯಾತ್ರೆ ಸಾಗುವ ಪ್ರಮುಖ ಸ್ಥಳಗಳಲ್ಲಿ ಬಿಜೆಪಿ ನಾಯಕರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ಮಾರ್ಗದುದ್ದಕ್ಕೂ ಪಕ್ಷದ ಧ್ವಜ, ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಪಾದಯಾತ್ರೆ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಬಿಜೆಪಿ ಪಾದಯಾತ್ರೆ ಸ್ವಾಗತಿಸಲು ಬಿಜೆಪಿ ಬಾವುಟಗಳಿಂದ ಅಲಂಕೃತಗೊಂಡಿರುವ ರಸ್ತೆ ಬದಿಗಳು. ಉತ್ಸಾಹ ಹೆಚ್ಚಿಸಿವೆ.

ಸೆ. 6ರಂದು ಬೆಳಿಗ್ಗೆ ಗಂಗಾವತಿಗೆ ಪ್ರವೇಶಗೊಂಡು, ತದನಂತರ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‌ನ ವಿನೋಬನಗರದ ಮೂಲಕ ಕಂಪ್ಲಿಗೆ ಸಂಜೆ 5.30ರ ಸುಮಾರಿಗೆ ಆಗಮಿಸಲಿದೆ. ಇಲ್ಲಿನ ಕಂಪ್ಲಿ-ಕೋಟೆ ಪ್ರದೇಶದ ಸ್ವಾಗತ ಕಮಾನ್ ಬಳಿಯಲ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಪಾದಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ.

ನಂತರ ಗಂಡುಗಲಿ ಕುಮಾರ ರಾಮನ ಕೋಟೆ ಮೂಲಕ ಪ್ರಮುಖ ರಸ್ತೆಗಳಾದ ನಡುವಲ ಮಸೀದಿ, ಡಾ. ರಾಜಕುಮಾರ ಮುಖ್ಯರಸ್ತೆ, ಮಾರೆಮ್ಮ ಗುಡಿ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. ತದನಂತರ ಮೆಟ್ರಿ, ದೇವಲಾಪುರದ ಮೂಲಕ ಮುಂದಿನ ಕ್ಷೇತ್ರಕ್ಕೆ ತೆರಳಲಿದ್ದಾರೆ.