ಮಂಗಳೂರು: ಅಡಕೆ ಆಮದು ಮೇಲೆ ಕೇಂದ್ರ ಸರ್ಕಾರ ಕನಿಷ್ಠ ದರ ಹೆಚ್ಚಳ ನಿಗದಿ ಮಾಡಿರುವುದಕ್ಕೆ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಹರ್ಷ ವ್ಯಕ್ತಪಡಿಸಿದೆ.
ವಿದೇಶದಿಂದ ಭಾರತಕ್ಕೆ ಅಡಿಕೆ ಆಮದು ಕನಿಷ್ಠ ದರವನ್ನು ಉತ್ಪಾದನಾ ವೆಚ್ಚ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೋ ಹಾಗೂ ಇನ್ನಿತರ ಸಹಕಾರಿ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದವು.
ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹಾಗೂ ಕೃಷಿ ಯಂತ್ರ ಮೇಳ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜತೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಪ್ರತ್ಯೇಕ ಮಾತನಾಡಿ ಮನವಿ ಮಾಡಿದ್ದರು.
ಈ ಎಲ್ಲ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಅಡಕೆ ಆಮದು ಮೇಲಿನ ಕನಿಷ್ಠ ದರ ಕೆಜಿಗೆ 251 ರು. ಗಳಿಂದ 351 ರು. ಗಳಿಗೆ ಏರಿಕೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಇದು ಸಮಸ್ತ ಅಡಕೆ ಬೆಳೆಗಾರರಿಗೆ ಆಶಾದಾಯಕವಾಗಿದ್ದು, ಬೆಳೆಗಾರ ಹಿತರಕ್ಷಕ ಸಂಸ್ಥೆ ಕ್ಯಾಂಪ್ಕೋ ಪ್ರಯತ್ನಕ್ಕೆ ಲಭಿಸಿದ ಯಶಸ್ಸಾಗಿದೆ.
ಇದಕ್ಕೆ ಕಾರಣಕರ್ತರಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಶೋಭಾ ಕರಂದ್ಲಾಜೆ, ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಕರಾವಳಿಯ ಸಂಸದರು ಮತ್ತು ಶಾಸಕರಿಗೆ ಕ್ಯಾಂಪ್ಕೋ ಆಡಳಿತ ಮಂಡಳಿ ಅಭಾರಿಯಾಗಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.