ಪಣಜಿ: ಕರ್ನಾಟಕ ವಿಧಾನಸಭೆಗೆ ನಾನು ಮೊಟ್ಟ ಮೊದಲ ಬಾರಿ ಆಯ್ಕೆಯಾದಾಗ ಇಂದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನೂ ಮಗುವಾಗಿದ್ದರು. ಇದರಿಂದಾಗಿ ನನಗೆ ಮತ್ತು ನಮ್ಮ ಪಕ್ಷಕ್ಕೆ ಬಿಜೆಪಿಯವರು ದೇಶ ಭಕ್ತಿಯ ಪಾಠ ಕಲಿಸಿಕೊಡುವ ಅಗತ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, `ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರು ಐತಿಹಾಸಿಕವಾಗಿ ಹಾಡಿದ ಆವೃತ್ತಿಯನ್ನು ಪಕ್ಷ ಅನುಸರಿಸಿದೆ’ ಎಂದು ಸಮರ್ಥಿಸಿಕೊಂಡರು. ಪಕ್ಷವು ದಶಕಗಳಿಂದ ಬಳಸುತ್ತಿದ್ದ ಆವೃತ್ತಿಯನ್ನು ಅನುಸರಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಏಕೆ ದೂರು ಎದುರಿಸಬೇಕು? ಇದು ಅಪರಾಧವಾಗಿದ್ದರೆ, ಗಾಂಧೀಜಿ ವಿರುದ್ಧ ಪ್ರಕರಣ ದಾಖಲಿಸಿ; ನೆಹರುಜಿ ವಿರುದ್ಧ ಪ್ರಕರಣ ದಾಖಲಿಸಿ; ಸರ್ದಾರ್ ವಲ್ಲಭಭಾಯಿ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿ ಎಂದು ಸವಾಲು ಎಸೆದರು.
ಕಾಂಗ್ರೆಸ್ ದಶಕಗಳ ಹಿಂದೆಯೇ ವಂದೇ ಮಾತರಂ ಕುರಿತು ನಿರ್ಣಯ ಅಂಗೀಕರಿಸಿದೆ ಮತ್ತು ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಈ ಪದ್ಧತಿ ಬದಲಾಗಬೇಕೇ ಎಂದು ಪ್ರಶ್ನಿಸಿದರು. ನಾಳೆ ಮತ್ತೊಂದು ಸರ್ಕಾರ ಬರುತ್ತದೆ. ಅವರು ಬೇರೆ ಏನಾದರೂ ಹೇಳಿದರೆ, ಅದು ಹಾಗೆಯೇ ಆಗುತ್ತದೆಯೇ?…. 90 ವರ್ಷಗಳಿಂದ ನಡೆಯುತ್ತಿರುವುದೇ ನಾವು ನಿಖರವಾಗಿ ಮಾಡಿದ್ದೇವೆ ಎಂದು ಅವರು ಹೇಳಿದರು.




















