ದಾವಣಗೆರೆ: ಚಾಮರಾಜನಗರದಲ್ಲಿ ನಡೆದ ಮೂವರ ಶೂಟೌಟ್ ಘಟನೆಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಘಟನೆ ನಡೆಯಬಾರದಿತ್ತು. ಆದರೆ ಘಟನೆ ನಡೆದು ಹೋಗಿದೆ. ಮನುಷ್ಯರು ಹಾಗೂ ಪ್ರಾಣಿಗಳನ್ನು ಒಂದೇ ರೀತಿಯಲ್ಲಿ ನೋಡಿರುವುದು ಖಂಡನೀಯ. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಈ ಕುರಿತು ಅರಣ್ಯ ಸಚಿವರು ಈಗಾಗಲೇ ಪ್ರತಿಕ್ರಿಯಿಸಿದ್ದು, ಜಿಂಕೆ ಮಾಂಸ ಹಾಗೂ ರೈಫಲ್ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಮಾಹಿತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಯಾರೇ ಏನೇ ಮಾಡಿದ್ದರೂ ಸೂಕ್ತ ತನಿಖೆ ನಡೆಸಿ, ಕಾನೂನುಬದ್ಧವಾಗಿ ಸೂಕ್ತ ನಿರ್ಧಾರ ಹಾಗೂ ಕ್ರಮ ಕೈಗೊಳ್ಳಬೇಕು. ಸದ್ಯ ತನಿಖೆ ನಡೆಯುತ್ತಿದ್ದು, ಸರಿಯಾದ ವರದಿ ಹೊರಬರಲಿದೆ ಎಂದು ಹೇಳಿದರು.
ಐಸಿಸಿ ಸಭೆ: ಇದೇ ವೇಳೆ ಭದ್ರಾ ಜಲಾಶಯದ ನೀರಿನ ಕುರಿತು ಮಂಗಳವಾರ ಐಸಿಸಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಎಲ್ಲಾ ರೈತ ಮುಖಂಡರು ಭಾಗವಹಿಸಲಿದ್ದಾರೆ. ಭದ್ರಾ ಜಲಾಶಯದಲ್ಲಿ ಸದ್ಯ ಎಷ್ಟು ನೀರು ಲಭ್ಯವಿದೆ ಎಂಬುದರ ಕುರಿತು ಚರ್ಚೆ ನಡೆಸಿ, ರೈತರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.






















