ಉತ್ತರ ಕನ್ನಡ: ದಾಂಡೇಲಿ ತಾಲೂಕಿನಲ್ಲಿ ಬಡವರ ಆಹಾರ ಭದ್ರತೆಗಾಗಿ ಸರ್ಕಾರ ನೀಡುತ್ತಿರುವ ಅನ್ನಭಾಗ್ಯದ ಪಡಿತರ ಅಕ್ಕಿ ಅಕ್ರಮವಾಗಿ ಖರೀದಿ–ಮಾರಾಟವಾಗುತ್ತಿದೆಯೇ ಎಂಬ ಅನುಮಾನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಡಿದೆ.
ಗ್ರಾಮಸ್ಥರಿಂದ ತಿಳಿದುಬಂದಿರುವ ಮಾಹಿತಿಯಂತೆ, ಪಡಿತರ ಅಂಗಡಿಗಳಲ್ಲಿ ಅನ್ನಭಾಗ್ಯದ ಅಕ್ಕಿ ವಿತರಣೆಯಾಗುತ್ತಿದ್ದಂತೆಯೇ ಕೆಲವರು ಗ್ರಾಮಗಳಿಗೆ ತೆರಳಿ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ ಎನ್ನಲಾಗಿದೆ. ಸಂಗ್ರಹಿಸಿದ ಅಕ್ಕಿಯನ್ನು ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ವಿತರಣೆಯ ಬೆನ್ನಲ್ಲೇ ಅಕ್ಕಿ ಸಂಗ್ರಹಣೆ: ಅನ್ನಭಾಗ್ಯದ ಅಕ್ಕಿ ವಿತರಣೆಯಾದ ಕೆಲವೇ ಸಮಯದಲ್ಲಿ ಗ್ರಾಮಗಳಲ್ಲಿ ಅಕ್ಕಿ ಖರೀದಿಸುವವರು ಕಾಣಿಸಿಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಫಲಾನುಭವಿಗಳಿಂದ ಕಡಿಮೆ ಬೆಲೆಗೆ ಅಕ್ಕಿ ಪಡೆದು, ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ನಂತರ ಬೇರೆಡೆಗೆ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ಈ ಚಟುವಟಿಕೆಯ ಹಿಂದೆ ಹಳಿಯಾಳ ಮತ್ತು ಅಳ್ನಾವರ ಭಾಗದಿಂದ ಬರುವ ತಂಡವೊಂದು ಇದೆ ಎನ್ನುವ ಮಾಹಿತಿಯೂ ಗ್ರಾಮಸ್ಥರಿಂದ ಕೇಳಿಬಂದಿದೆ. ಆದರೆ ಈ ಆರೋಪಗಳ ಕುರಿತು ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.
ಬಡವರ ಅಕ್ಕಿ ಮಧ್ಯವರ್ತಿಗಳ ಪಾಲು: ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ದೊರೆಯಬೇಕಾದ ಅಕ್ಕಿ ಮಧ್ಯವರ್ತಿಗಳ ಮೂಲಕ ವಾಣಿಜ್ಯ ಉದ್ದೇಶಕ್ಕೆ ತಿರುಗಿಸಲಾಗುತ್ತಿದ್ದರೆ, ಯೋಜನೆಯ ಮೂಲ ಆಶಯವೇ ಪ್ರಶ್ನಾರ್ಹವಾಗುತ್ತದೆ.ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆಯಿಂದ ಕ್ರಮ ಜರುಗಿಸಬೇಕಿದೆ.






















