ಬೆಳಗಾವಿ: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮನೆಯ ನಲ್ಲಿಯ ಸಂಪರ್ಕ ಕಡಿತಗೊಳಿಸಿದ್ದನ್ನು ವಿರೋಧಿಸಿ ಪಟ್ಟಣದ ಮಹಾಂತೇಶ ಸವದಿ ಹಾಗೂ ಆತನ ಪತ್ನಿ ಶ್ರುತಿ ತಹಶೀಲ್ದಾರ್ ಕಚೇರಿಗೆ ತೆರಳಿ ದಯಾಮರಣ ಕೋರಿ ಮನವಿ ಸಲ್ಲಿಸಿದ್ದಾರೆ.
ಆಸ್ತಿ ಕುರಿತು ಮುಂಜುನಾಥ ಹಾಗೂ ಸಹೋದರ ನಡುವೆ ವ್ಯಾಜ್ಯವಿದ್ದು ಈವರೆಗೆ ಇತ್ಯರ್ಥಗೊಂಡಿಲ್ಲ. ಕೆಲ ಪಪಂ ಸದಸ್ಯರು ಹಾಗೂ ಅಧಿಕಾರಿಗಳು ಪತಿಯ ಸಹೋದರನಿಗೆ ಬೆಂಬಲ ನೀಡಿದ್ದು ಉದ್ದೇಶಪೂರ್ವಕವಾಗಿ ಕೆಲ ದಿನಗಳಿಂದ ನಮ್ಮ ಮನೆಯ ನಲ್ಲಿ ಸಂಪರ್ಕ ಕಡಿತಗೊಳಿಸಿದ್ದಾರೆ. ಕುಡಿಯಲು ನೀರು ಸಹ ದೊರಕದಂತೆ ಮಾಡಿದ್ದಾರೆ. ಹೀಗಿದ್ದಾಗಿ ನಮ್ಮ ಮಕ್ಕಳು ಹಾಗೂ ಪತಿ ಬದುಕುವುದಾದರೂ ಹೇಗೆ ಎಂದು ಗ್ರೇಡ್ 2 ತಹಶೀಲ್ದಾರರನ್ನು ಪ್ರಶ್ನಿಸಿದ ಶ್ರುತಿ ಸವದಿ, ಈಗಾಗಲೇ ಅನೇಕ ಬಾರಿ ಪಪಂ ಅಧಿಕಾರಿಗಳು ಹಾಗೂ ಸದಸ್ಯರಲ್ಲಿ ವಿನಂತಿಸಿದರೂ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಮನವಿ ಸ್ವೀಕರಿಸಿದ ಗ್ರೇಡ್ 2 ಅಧಿಕಾರಿಗಳು ಪಪಂ ಅಧಿಕಾರಿಗಳನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವುದಾಗಿ ಹೇಳಿದರು. 2 ದಿನಗಳಲ್ಲಿ ನಲ್ಲಿ ಸಂಪರ್ಕ ಕಲ್ಪಿಸದಿದ್ದರೆ ಪಪಂ ಕಚೇರಿ ಎದುರಿನಲ್ಲಿ ಧರಣಿ ಕುಳಿತು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದಂಪತಿ ಎಚ್ಚರಿಸಿದ್ದಾರೆ.






















