ಮದುವೆ ವಿವಾದದ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನ; ರಾಜಕೀಯ ಪ್ರಭಾವ ಬಳಕೆ, ಸಚಿವರ ಹೆಸರು ದುರ್ಬಳಕೆ ಆರೋಪ
ಬೆಳಗಾವಿ: ಮದುವೆಯ ಭರವಸೆ ನೀಡಿ ಯುವತಿಯನ್ನು ವಂಚಿಸಲಾಗಿದೆ ಹಾಗೂ ಬಳಿಕ ಆಕೆಯ ಮೇಲೆ ರಾಜಕೀಯ ಪ್ರಭಾವ ಬಳಸಿ ಒತ್ತಡ ಹೇರಲಾಗಿದೆ ಎಂಬ ಆರೋಪದ ಪ್ರಕರಣ ಬೆಳಗಾವಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಆಯೇಷಾ ಸನದಿ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿವೆ.
ಯುವತಿಯ ಪಾಲಕರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ದೂರಿನ ಪ್ರಕಾರ, ಸಲೀಂ ಕಿಲ್ಲೇದಾರ್ ಎಂಬ ಯುವಕ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದಾನೆ. ಈ ವೇಳೆ ಇಬ್ಬರ ಖಾಸಗಿ ಕ್ಷಣಗಳ ಫೋಟೊಗಳು ಹಾಗೂ ಇತರೆ ಮಾಹಿತಿಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ನಂತರ ಯುವತಿ ಮದುವೆಯಾಗುವಂತೆ ಒತ್ತಾಯಿಸಿದಾಗ, ಆಕೆಯನ್ನು ಹಿಂದೆ ಸರಿಸಲು ವಿವಿಧ ರೀತಿಯ ಒತ್ತಡ ಹಾಗೂ ಬೆದರಿಕೆಗಳು ಬಂದಿವೆ ಎಂದು ಪಾಲಕರು ದೂರಿದ್ದಾರೆ. ಯುವತಿ ಸಂಬಂಧ ಮುಂದುವರಿಸಿ ಮದುವೆಯಾಗಲು ಬಯಸಿದ್ದರೂ, ಅದನ್ನು ತಡೆಯಲು ರಾಜಕೀಯ ಪ್ರಭಾವ ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಖಾಸಗಿ ಫೋಟೊ ಬಹಿರಂಗಪಡಿಸುವ ಬೆದರಿಕೆ ಆರೋಪ : ದೂರಿನಲ್ಲಿರುವ ಮಾಹಿತಿಯಂತೆ, ಯುವತಿ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಆಕೆಯ ಖಾಸಗಿ ಕ್ಷಣಗಳ ಫೋಟೊಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಯುವತಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಇಲಾಖೆಯೇ ಅನಾಥವಾಗಿದೆ: ಖರ್ಗೆ ವಿರುದ್ಧ R ಅಶೋಕ ಆಕ್ರೋಶ
ಇದೇ ಒತ್ತಡ ಹಾಗೂ ಕಿರುಕುಳದ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಜೀವನ-ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಚಿವರ ಹೆಸರು ದುರ್ಬಳಕೆ ಆರೋಪ : ಪ್ರಕರಣದ ಮತ್ತೊಂದು ಗಂಭೀರ ಅಂಶವೆಂದರೆ, ಕಾಂಗ್ರೆಸ್ ನಾಯಕಿ ಆಯೇಷಾ ಸನದಿ ಅವರು ರಾಜಕೀಯ ಪ್ರಭಾವದ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ. ದೂರಿನ ಪ್ರಕಾರ, “ನನಗೆ ಸಚಿವ ಸತೀಶ ಜಾರಕಿಹೊಳಿ ಅವರ ಪಿಎ ಪರಿಚಯವಿದೆ. ಪೊಲೀಸ್ ಠಾಣೆಯಲ್ಲಿಯೂ ನನ್ನ ಮಾತೇ ನಡೆಯುತ್ತದೆ” ಎಂದು ಹೇಳಿ ಒತ್ತಡ ಹೇರಲಾಗಿದೆ ಎಂದು ಯುವತಿಯ ಪಾಲಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡದ ಚಿರಾಪುಂಜಿ ಕ್ಯಾಸಲ್ ರಾಕ್ನಲ್ಲಿ ಮಳೆ ಕುಸಿತ: ಸುಪಾ ಜಲಾಶಯಕ್ಕೂ ಆತಂಕ
ಈ ಆರೋಪಗಳು ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ಆಯಾಮವನ್ನು ನೀಡಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಪೊಲೀಸ್ ತನಿಖೆಗೆ ಒತ್ತಾಯ : ಯುವತಿಯ ಆತ್ಮಹತ್ಯೆ ಯತ್ನದ ಹಿನ್ನೆಲೆ, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಪಾತ್ರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕುಟುಂಬ ಸದಸ್ಯರು ಹಾಗೂ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.






















