ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದು, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಖಚಿತವಾದ ಬಳಿಕವೇ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್, ಸದನದಲ್ಲಿ ಬಿಜೆಪಿ ನಾಯಕರು ನಡೆಸಿದ ಹೋರಾಟದ ಸಂದರ್ಭದಲ್ಲಿ ವಿಜಯೇಂದ್ರ ಅವರ ಪಾತ್ರವನ್ನು ಪ್ರಶ್ನಿಸಿದರು. “ಆರ್. ಅಶೋಕ್, ಸುನೀಲ್ ಕುಮಾರ್ ಸೇರಿದಂತೆ ಎಲ್ಲರೂ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು. ಆಗ ವಿಜಯೇಂದ್ರ ಐದು ನಿಮಿಷವೂ ಬಾವಿಯಲ್ಲಿ ನಿಲ್ಲಲಿಲ್ಲ. ಈಗ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದರೆ ಕ್ರೆಡಿಟ್ ಬರುತ್ತಾ?” ಎಂದು ಪ್ರಶ್ನಿಸಿದರು.
“ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ ಬಳಿಕ ಪಾದಯಾತ್ರೆ ಗ್ಯಾರಂಟಿಯಾಗಿದೆ. ಅವರ ವಾರಂಟಿ ಮುಗಿದಿದೆ. ಹೀಗಾಗಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹಾಗೂ ಹೀರೋ ಆಗಲು ಪಾದಯಾತ್ರೆ ಹೊರಟಿದ್ದಾರೆ” ಎಂದು ಯತ್ನಾಳ್ ಟೀಕಿಸಿದರು.
ಪಾದಯಾತ್ರೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟವಾಗಲಿದೆ ಎಂಬುದು ಗೊತ್ತಿಲ್ಲ. ಆದರೆ ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ತೆಗೆಯಬಹುದು ಎಂಬ ಭಯ ವಿಜಯೇಂದ್ರ ಅವರಿಗೆ ಬಂದಿದೆ. ಹೀಗಾಗಿ ಪಾದಯಾತ್ರೆ ಮೂಲಕ ತಾವು ಹೀರೋ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
“ನಿಜವಾಗಿಯೂ ಹೋರಾಟ ಮತ್ತು ಪಾದಯಾತ್ರೆ ಮಾಡುವುದಾದರೆ ಕೆಪಿಎಸ್ಸಿ ಹಗರಣದ ವಿರುದ್ಧ ಹೋರಾಟ ಮಾಡಲಿ” ಎಂದು ಯತ್ನಾಳ್ ಸವಾಲು ಹಾಕಿದರು.





















