ಹೈದರಾಬಾದ್: ತೆಲಂಗಾಣ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮತ್ತು ಶಿಕ್ಷಣತಜ್ಞ ಪ್ರೊ. ಎಂ. ಕೋದಂಡರಾಮ್ ಅವರನ್ನು ತೆಲಂಗಾಣ ವಿಧಾನ ಪರಿಷತ್ತಿನ ಸದಸ್ಯರಾಗಿ (MLC) ನಾಮನಿರ್ದೇಶನ ಮಾಡಿದ್ದಾರೆ.
ರಾಜ್ಯಪಾಲರ ಅಧಿಸೂಚನೆಯ ಪ್ರಕಾರ, ಇವರಿಬ್ಬರ ಅವಧಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಆರು ವರ್ಷಗಳವರೆಗೆ ಇರುತ್ತದೆ. ಇವರಿಬ್ಬರೂ ಶೀಘ್ರದಲ್ಲೇ ಎಂಎಲ್ಸಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಕಾನೂನು ಹಿನ್ನಲೆ, ವಿವಾದ : ಈ ನಾಮನಿರ್ದೇಶನವು “ಬಾಕಿ ಇರುವ ಮೇಲ್ಮನವಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ” ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವು ಹಿಂದೆ ನ್ಯಾಯಾಂಗದಲ್ಲಿದ್ದು, ಹಿಂದಿನ ಭಾರತ ರಾಷ್ಟ್ರ ಸಮಿತಿ ಸರ್ಕಾರದ ಶಿಫಾರಸುಗಳ ಕುರಿತು ವಿವಾದ ಉಂಟಾಗಿತ್ತು.
ಅಂದಿನ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ದಾಸೋಜು ಶ್ರವಣ್ ಮತ್ತು ಕುರ್ರಾ ಸತ್ಯನಾರಾಯಣ ಅವರ ನಾಮನಿರ್ದೇಶನವನ್ನು ತಿರಸ್ಕರಿಸಿದ್ದರು. ಇದರಿಂದಾಗಿ ವಿಷಯ ನ್ಯಾಯಾಲಯದ ಹಂತಕ್ಕೆ ತಲುಪಿತ್ತು.
ಹೊಸ ಸರ್ಕಾರದ ಶಿಫಾರಸು : ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಮೊದಲಿಗೆ ಕೋದಂಡರಾಮ್ ಮತ್ತು ಅಮೇರ್ ಅಲಿ ಖಾನ್ ಅವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ನಂತರ ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ಮರುಪರಿಶೀಲಿಸಲು ಸೂಚನೆ ನೀಡಿತ್ತು.
ಇದಾದ ಬಳಿಕ 2025ರಲ್ಲಿ ಸರ್ಕಾರವು ಮೊಹಮ್ಮದ್ ಅಜರುದ್ದೀನ್ ಮತ್ತು ಕೋದಂಡರಾಮ್ ಅವರನ್ನು ಮತ್ತೆ ಶಿಫಾರಸು ಮಾಡಿದ್ದು, ಇದೀಗ ರಾಜ್ಯಪಾಲರು ಅಧಿಕೃತವಾಗಿ ನಾಮನಿರ್ದೇಶನ ಮಾಡಿದ್ದಾರೆ.
ಕೋದಂಡರಾಮ್ಗೆ ಎರಡನೇ ಅವಕಾಶ : ಪ್ರೊ. ಕೋದಂಡರಾಮ್ ಅವರು ಈ ಹಿಂದೆ 2024ರಲ್ಲಿ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದರೂ, 2025ರಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇದೀಗ ಅವರು ಮತ್ತೆ ಪರಿಷತ್ತಿಗೆ ಪ್ರವೇಶ ಪಡೆಯುತ್ತಿದ್ದಾರೆ.
ಇನ್ನು, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿದ್ದ ಅಜರುದ್ದೀನ್ ಅವರು ಮೊದಲ ಬಾರಿಗೆ ತೆಲಂಗಾಣ ವಿಧಾನ ಪರಿಷತ್ತಿಗೆ ಪ್ರವೇಶಿಸಲಿದ್ದಾರೆ.




















