‘ಬಿಗ್ ಬಾಸ್ ಸೀಸನ್-13’ರ 2ನೇ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ನಿರೀಕ್ಷೆಯಂತೆಯೇ ನಿರೂಪಕ ಕಿಚ್ಚ ಸುದೀಪ್ ಅಗ್ನಿಪರೀಕ್ಷೆಯ 4 ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆ ಸದಸ್ಯರ ಅನುಚಿತ ವರ್ತನೆ ಹಾಗೂ ಮಾತಿನ ಮಿತಿ ಮೀರಿದ ನಡವಳಿಕೆಗೆ ಸುದೀಪ್ ಕಟು ಮಾತುಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೇದಿಕೆಗೆ ಆಗಮಿಸುತ್ತಿದ್ದಂತೆ ಶೋ ಮತ್ತು ವೀಕ್ಷಕರ ಪರವಾಗಿ ನೇರ ಪ್ರಶ್ನೆ ಎತ್ತಿದ ಸುದೀಪ್, “ಕೆಲವರು ಅವಕಾಶ ಕೊಟ್ಟ ವೇದಿಕೆಗೆ ಗೌರವ ನೀಡುತ್ತಿಲ್ಲ. ಸ್ಪರ್ಧಿಗಳಲ್ಲಿ ಮಾನವೀಯತೆಯ ಕೊರತೆ ಎದ್ದು ಕಾಣುತ್ತಿದ್ದು, ತಾವು ಮಾಡಿದ್ದೇ ಸರಿ ಎಂಬ ಮೂರ್ಖತನ ತಲೆಗೆ ಏರಿದಂತಿದೆ” ಎಂದು ಕಿಡಿಕಾರಿದರು.
ವಿಶೇಷವಾಗಿ ಸ್ಪರ್ಧಿ ಮಾಡ್ರನ್ ಮಹಾಕವಿ ಮಂಜ ‘ಅಣ್ಣಾ’ ಎಂಬ ಕರೆಗೆ ತಿರುಗೇಟು ನೀಡಿದ ಕಿಚ್ಚ, “ನಾನು ಅಣ್ಣ ಎನಿಸಿಕೊಳ್ಳಬೇಕಾದರೆ ತಮ್ಮಂದಿರಿಗೆ ಬೆಲೆ ಇರಬೇಕು. ಈ ಹಿಂದೆ ನೀವು ಸಹಸ್ಪರ್ಧಿಗಳನ್ನು ‘ಕಿತ್ತು ಹೋಗಿರೋ 50 ಪೈಸೆಗೆ ಬೆಲೆ ಇಲ್ಲದವರು’ ಎಂದು ನಿಂದಿಸಿದ್ದೀರಿ” ಎಂದು ಅವರದ್ದೇ ಮಾತನ್ನು ನೆನಪಿಸಿ ತರಾಟೆಗೆ ತೆಗೆದುಕೊಂಡರು.
ಅಲ್ಲದೆ.. “ಕಳೆದ 12 ಸೀಸನ್ಗಳಿಂದ ಗಳಿಸಿದ ಕೋಟ್ಯಂತರ ವೀಕ್ಷಕರೇ ಈ ಶೋದ ನಿಜವಾದ ಆಸ್ತಿ. ಯಾವುದೋ 4 ಜನರ ಬೇಜವಾಬ್ದಾರಿ ವರ್ತನೆಗಾಗಿ ಆ ವೀಕ್ಷಕರನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ” ಎಂದು ಎಚ್ಚರಿಸಿದರು. ‘ಬಳೆ ಹಾಕಿಕೊಂಡು ಕೂತ್ಕೊಳ್ಳಿ’ ಹಾಗೂ ‘ಯೋಗ್ಯತೆಗೆ ಬೆಂಕಿ ಹಾಕ’ ಎಂಬ ಕಿರಣ್ ಶಾಸ್ತ್ರಿ ವಿವಾದಾತ್ಮಕ ಹೇಳಿಕೆಗಳಿಗೂ ಸುದೀಪ್ ವೇದಿಕೆಯಲ್ಲಿ ಕಠಿಣ ತಮ್ಮ ಮಾತುಗಳಿಂದ ಎಚ್ಚರಿಸಿದ್ದಾರೆ.





















