Home Advertisement
Home ಸುದ್ದಿ ದೇಶ ತಮಿಳುನಾಡು: BJP ತಟಸ್ಥ ನಿಲುವು- TVK ಸರ್ಕಾರ ರಚನೆಗೆ ಕುತೂಹಲ

ತಮಿಳುನಾಡು: BJP ತಟಸ್ಥ ನಿಲುವು- TVK ಸರ್ಕಾರ ರಚನೆಗೆ ಕುತೂಹಲ

0
141

BJP ಮಹತ್ವದ ಘೋಷಣೆ: ತಮಿಳುನಾಡು ಸರ್ಕಾರ ರಚನೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ

ತಮಿಳನಾಡು: ರಾಜಕೀಯದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ, ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಜನಾದೇಶವನ್ನು ಗೌರವಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಹಿನ್ನೆಲೆ, ಪಕ್ಷದ ಮುಂದಿನ ರಾಜಕೀಯ ನಡೆ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ ನೈನಾರ್ ನಾಗೇಂದ್ರನ್, “ತಮಿಳುನಾಡಿನ ಜನರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬಿಜೆಪಿ ಸದಾ ಬದ್ಧವಾಗಿದೆ.

ಚುನಾವಣೆಯಲ್ಲಿ ನಾವು ಸಂಪೂರ್ಣ ಉತ್ಸಾಹದಿಂದ ಭಾಗವಹಿಸಿದ್ದೇವೆ. ಆದರೆ ಜನರು ಸರ್ಕಾರ ರಚಿಸಲು ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ. “ರಾಜ್ಯದ ಜನರ ಇಚ್ಛೆಯನ್ನು ಗೌರವಿಸುತ್ತೇವೆ. ಸರ್ಕಾರ ರಚಿಸುವ ಯಾವುದೇ ಪ್ರಯತ್ನದಲ್ಲಿ ಬಿಜೆಪಿ ಭಾಗಿಯಾಗುವುದಿಲ್ಲ. ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಾಗಲಿ, ಮತ ಹಾಕುವುದಾಗಲಿ ಮಾಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಇದೀಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿ ವಿಜಯ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಹೊರಹೊಮ್ಮಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಇನ್ನೂ ಬಹುಮತದ ಅಂಚಿನಲ್ಲಿದೆ.

ಈ ನಡುವೆ ಕಾಂಗ್ರೆಸ್‌ ಟಿವಿಕೆಗೆ ಷರತ್ತುಬದ್ಧ ಬೆಂಬಲ ಘೋಷಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಐದು ಶಾಸಕರ ಬೆಂಬಲದೊಂದಿಗೆ ಟಿವಿಕೆ ಮೈತ್ರಿಕೂಟದ ಸಂಖ್ಯೆ 113ಕ್ಕೆ ಏರಿದೆ. ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ.

ಇನ್ನೊಂದೆಡೆ, ವಿದುತಲೈ ಚಿರುತೈಗಲ್ ಕಚ್ಚಿ (VCK) ಮುಖ್ಯಸ್ಥ ಥೋಲ್ ತಿರುಮಾವಲವನ್ ಅವರು, ಸರ್ಕಾರ ರಚನೆ ಕುರಿತು ಪಕ್ಷದ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ವಿಸಿಕೆ ಎರಡು ಸ್ಥಾನಗಳನ್ನು ಹೊಂದಿದ್ದು, ಅವರ ಬೆಂಬಲ ವಿಜಯ್‌ಗೆ ಮಹತ್ವದ ಬಲ ನೀಡಬಹುದು.

ಅದೇ ರೀತಿ ಭಾರತ ಕಮ್ಯುನಿಸ್ಟ್ ಪಕ್ಷ (Marxist) ಮತ್ತು ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ (CPI) ಕೂಡ ಪ್ರತ್ಯೇಕ ಕಾರ್ಯಕಾರಿ ಸಭೆ ನಡೆಸಿ ಟಿವಿಕೆ ಬೆಂಬಲದ ಕುರಿತು ಚರ್ಚೆ ಆರಂಭಿಸಿವೆ. ಈ ಎರಡು ಪಕ್ಷಗಳಿಗೂ ತಲಾ ಎರಡು ಸ್ಥಾನಗಳಿವೆ.

ಕಾಂಗ್ರೆಸ್, ವಿಸಿಕೆ, ಸಿಪಿಐ ಹಾಗೂ ಸಿಪಿಐ(ಎಂ) ಪಕ್ಷಗಳು ಒಂದಾಗಿ ಟಿವಿಕೆಗೆ ಬೆಂಬಲ ನೀಡಿದರೆ, ವಿಜಯ್ ಅವರ ಪಕ್ಷ ಬಹುಮತದ ಗಡಿ ದಾಟಿ ಮೊದಲ ಪ್ರಯತ್ನದಲ್ಲೇ ಸರ್ಕಾರ ರಚಿಸುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಸ್ಪಷ್ಟ ಬಹುಮತ ಯಾರಿಗೂ ಸಿಗದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ತೀವ್ರ ಚಟುವಟಿಕೆಗಳು ನಡೆಯುತ್ತಿದ್ದು, ಮುಂದಿನ ಕೆಲವು ದಿನಗಳು ಅತ್ಯಂತ ನಿರ್ಣಾಯಕವಾಗಿವೆ.