ಉತ್ತರ ಮತ್ತು ಪೂರ್ವ ಭಾರತದಾದ್ಯಂತ ಭೀಕರ ಉಷ್ಣಗಾಳಿ (Heatwave) ಆವರಿಸಿದ್ದು, ಏಪ್ರಿಲ್ ತಿಂಗಳಲ್ಲೇ ದಾಖಲೆ ಮಟ್ಟದ ತಾಪಮಾನ ಏರಿಕೆಯಾಗಿದೆ. ಹವಾಮಾನ ತಜ್ಞರ ಮುನ್ಸೂಚನೆಯಂತೆ, ಈ ಭಾನುವಾರ ಹಲವು ರಾಜ್ಯಗಳಲ್ಲಿ ಬಿಸಿಲ ಧಗೆ ಸಾರ್ವಕಾಲಿಕ ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಪಾದರಸವು 45°C ನಿಂದ 48°C ವರೆಗೆ ಏರಲಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಲವು ರಾಜ್ಯಗಳಿಗೆ ಬಿಸಿಗಾಳಿಯ ಎಚ್ಚರಿಕೆ: ಕೇವಲ ರಾಜಸ್ಥಾನ ಮಾತ್ರವಲ್ಲದೆ ದೆಹಲಿ, ಹರಿಯಾಣ, ಪಂಜಾಬ್, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲೂ ತಾಪಮಾನವು 43°C ನಿಂದ 45°C ಆಸುಪಾಸಿನಲ್ಲಿರಲಿದೆ. ಒಣ ಹವೆ ಮತ್ತು ಬಿಸಿ ಮಾರುತಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ಏಪ್ರಿಲ್ ತಿಂಗಳ ಆರಂಭಿಕ ವಾರಗಳಲ್ಲೇ ಇಷ್ಟು ತೀವ್ರತರವಾದ ಬಿಸಿಲು ಕಾಣಿಸಿಕೊಂಡಿರುವುದು ಹವಾಮಾನ ವೈಪರೀತ್ಯದ ಆತಂಕಕಾರಿ ಮುನ್ಸೂಚನೆಯಾಗಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ ಮತ್ತು ಮುನ್ನೆಚ್ಚರಿಕೆ: ಹೆಚ್ಚುತ್ತಿರುವ ತಾಪಮಾನವು ಮಕ್ಕಳು, ವೃದ್ಧರು ಮತ್ತು ಹೊರಾಂಗಣ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಬಹುದು. ನಿರ್ಜಲೀಕರಣ (Dehydration) ಮತ್ತು ಶಾಖದ ಹೊಡೆತದಿಂದ (Heatstroke) ರಕ್ಷಿಸಿಕೊಳ್ಳಲು ಸಾರ್ವಜನಿಕರು ಮಧ್ಯಾಹ್ನದ ವೇಳೆ ಅನಗತ್ಯವಾಗಿ ಹೊರಬರದಂತೆ ಸೂಚಿಸಲಾಗಿದೆ. ಹಗುರವಾದ ಹತ್ತಿ ಬಟ್ಟೆ ಧರಿಸುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮುಂಜಾಗೃತೆ: ಸೋಮವಾರವೂ ಸಹ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಮಂಗಳವಾರದಿಂದ ಪಶ್ಚಿಮದ ಮಾರುತಗಳ ಪ್ರಭಾವದಿಂದಾಗಿ ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗುವ ನಿರೀಕ್ಷೆಯಿದೆ. ಆದ್ರು ಬಿಸಿಲ ಬೇಗೆಯಿಂದ ತಕ್ಷಣದ ಮುಕ್ತಿ ಸಿಗುವುದು ಅನುಮಾನವಾಗಿದ್ದು, ಕ್ರಮೇಣ ಸುಧಾರಣೆ ಕಂಡುಬರಲಿದೆ. ಹವಾಮಾನದ ಈ ಬದಲಾವಣೆಯು ಮುಂಬರುವ ಕಠಿಣ ಬೇಸಿಗೆಗೆ ಮುನ್ಸೂಚನೆಯಾಗಿದ್ದು, ಜನರು ಜಾಗರೂಕರಾಗಿರುವುದು ಅವಶ್ಯಕವಾಗಿದೆ.























